ಕಲಬುರಗಿ: ಶಾಲೆಗಳನ್ನು ಆರಂಭಿಸುವ ಕುರಿತು ಚಿಂತನೆ ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೆ ಕಲಬುರಗಿಯಲ್ಲಿ ನಡೆದಿರುವ ಘಟನೆಯೊಂದು ಬಿಗ್ ಶಾಕ್ ನೀಡಿದ್ದು, ಶಾಲೆಗಳನ್ನು ತೆರೆಯುವ ಮುನ್ನ ಸೂಕ್ತ ತೀರ್ಮಾನ ಕೈಗೊಳ್ಳಲು ಎಚ್ಚರಿಕೆ ಗಂಟೆಯಾಗಿದೆ.
ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ 19 ವಾರ್ಡ್ಗಳಲ್ಲಿ ವಠಾರ ಶಾಲೆ ನಡೆಸಲಾಗುತ್ತಿತ್ತು. ಇದೀಗ 6, 7 ಮತ್ತು 8ನೇ ತರಗತಿಯ ಐದು ವಿದ್ಯಾರ್ಥಿಗಳಿಗೆ ಕರೊನಾ ಪಾಸಿಟಿವ್ ದೃಢವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಪರೀಕ್ಷೆ ಇಲ್ಲದ ಶೈಕ್ಷಣಿಕ ವರ್ಷವಾಗಲಿ ಇದು: ಶಾಲಾರಂಭಕ್ಕೆ ಶಿಫಾರಸು ಮಾಡಿತು ಮಕ್ಕಳ ಹಕ್ಕುಗಳ ಆಯೋಗ
ವಠಾರ ಶಾಲೆಯ ಮೂಲಕ ಶಿಕ್ಷಕರು ಪಾಠ ಮಾಡುತ್ತಿದ್ದರು. ಮುಖ್ಯ ಶಿಕ್ಷಕರಿಗೆ ಕರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಶಾಲೆಯ ಎಲ್ಲ ಮಕ್ಕಳಿಗು ಮತ್ತು ಶಿಕ್ಷಕರಿಗೂ ರ್ಯಾಂಡಮ್ ಕರೊನಾ ಟೆಸ್ಟ್ ಮಾಡಿಸಲಾಗಿತ್ತು. ಶಾಲೆಯಲ್ಲಿ ಒಟ್ಟು 703 ವಿದ್ಯಾರ್ಥಿಗಳಿದ್ದು, ಟೆಸ್ಟ್ನಲ್ಲಿ ಐದು ಮಕ್ಕಳಿಗೆ ಪಾಸಿಟಿವ್ ಬಂದಿದೆ.
ಶಾಲೆಯ ಶಿಕ್ಷಕರು ಮತ್ತು ಉಳಿದ ಮಕ್ಕಳಿಗೆ ನೆಗಿಟಿವ್ ಆಗಿದ್ದು, ಇನ್ನೂ 25 ಮಕ್ಕಳ ವೈದ್ಯಕೀಯ ವರದಿ ಬಾಕಿ ಇದೆ. ಕರೊನಾ ಕಾಣಿಸಿಕೊಂಡ ಬೆನ್ನಲ್ಲೆ ಎಚ್ಚೆತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳು 19 ವಾರ್ಡ್ಗಳಲ್ಲಿ ನಡೆಯುತ್ತಿದ್ದ ವಠಾರ ಶಾಲೆಯನ್ನು ಬಂದ್ ಮಾಡಿಸಿದ್ದಾರೆ.
ಶಾಲೆಯ ಎಲ್ಲ ಕ್ಲಾಸ್ ರೂಮ್ಗಳನ್ನ ಸೀಲ್ ಡೌನ್ ಮಾಡುವಂತೆ ಅಫಜಲಪುರ ಕ್ಷೇತ್ರದ ಶಿಕ್ಷಣಾಧಿಕಾರಿ ಚಿತ್ರಶೇಖರ್ ದಿಗ್ವಿಜಯ ನ್ಯೂಸ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಶಾಲೆ ತೆರೆಯಲು ಚಿಂತಿಸುತ್ತಿರುವ ಸರ್ಕಾರಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ. (ದಿಗ್ವಿಜಯ ನ್ಯೂಸ್)
ಪಾಲಕರು ಒಪ್ಪಿದರಷ್ಟೇ ಶಾಲೆ ಆರಂಭಿಸ್ತೇವೆ – ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ