ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನಕ್ಕೆ ಡ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಿಎಂ ದಿವಂಗತ ಎಂ.ಕರುಣಾನಿಧಿ ಮತ್ತು ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಕಾರಣ ಎಂದು ತಮಿಳುನಾಡು ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ಅವರನ್ನು ತಪ್ಪಾಗಿ ಆರೋಪಿಸಲಾಯಿತು. 2015ರಲ್ಲಿ ಎಲ್ಲ ಆರೋಪಗಳಿಂದ ಖುಲಾಸೆಗೊಂಡರು ಸಹ ಅದರ ವಿರುದ್ಧ ಡಿಎಂಕೆ ಮೇಲ್ಮನವಿ ಸಲ್ಲಿಸಿದ್ದು ಜಯಲಲಿತಾ ಅವರನ್ನು ಖಿನ್ನತೆಗೆ ದೂಡಿತು ಎಂದು ಪಳನಿಸ್ವಾಮಿ ದೂರಿದ್ದಾರೆ.
ಇದನ್ನೂ ಓದಿರಿ: 23ರ ಯುವಕನ ಜತೆ 41ರ ಮಹಿಳೆಯ ಲವ್ವಿಡವ್ವಿ: ಮಾಡಬಾರದ್ದನ್ನು ಮಾಡಿ ಪೊಲೀಸ್ ಬಲೆಗೆ ಬಿದ್ದ ಜೋಡಿ!
ಅಮ್ಮ (ಜಯಲಲಿತಾ) ಸಾವಿಗೆ ಡಿಎಂಕೆ ಕಾರಣ. ದೇವರು ಖಂಡಿತ ಅವರನ್ನು (ಕರುಣಾನಿಧಿ ಮತ್ತು ಸ್ಟಾಲಿನ್) ಶಿಕ್ಷಿಸುತ್ತಾನೆ. ಸಾವಿಗೆ ಯಾರು ಹೊಣೆ ಎಂಬುದನ್ನು ರಾಜ್ಯದ ಜನರು ಮನಗಂಡಿದ್ದಾರೆ. ಅಮ್ಮನ ಆತ್ಮ ಖಂಡಿತವಾಗಿಯು ಅವರಿಗೆ ಶಿಕ್ಷೆಯನ್ನು ನೀಡುತ್ತದೆ ಎಂದು ಪಳನಿಸ್ವಾಮಿ ಹೇಳಿದರು.
ಪ್ರಸ್ತುತ ಜಯಲಲಿತಾರ ಸಾವಿನ ತನಿಖೆ ನಡೆಸುತ್ತಿರುವ ಅರುಮುಗಸ್ವಾಮಿ ಆಯೋಗದ ತನಿಖೆಗೆ ಚುರುಕು ಮುಟ್ಟಿಸುವ ಭರವಸೆಯನ್ನು ಎಂಕೆ ಸ್ಟಾಲಿನ್ ನೀಡಿದ್ದು, ಈ ಬಗ್ಗೆ ಮಾತನಾಡಿದ ಪಳನಿಸ್ವಾಮಿ ಮಾಜಿ ಮುಖ್ಯಮಂತ್ರಿಯವರ ಸಾವಿಗೆ ಡಿಎಂಕೆ ಅವರೇ ಕಾರಣ ಎಂದರು.
ಏಪ್ರಿಲ್ 6 ತಮಿಳುನಾಡು ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಎಐಎಡಿಎಂಕೆ ಭಾನುವಾರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಉಚಿತ ಮನೆ, 75 ಸಾವಿರ ರೂ. ವರೆಗೆ ರೈತರಿಗೆ ಸಬ್ಸಿಡಿ, ಉಚಿತ ಸೋಲಾರ್ ಅಡುಗೆ ಸ್ಟೌ ಮತ್ತು ಉಚಿತ ವಾಷಿಂಗ್ ಮೆಷಿನ್ ಭರವಸೆಯನ್ನು ಪ್ರಾಣಾಳಿಕೆಯಲ್ಲಿ ನೀಡಿದೆ.
ಇದನ್ನೂ ಓದಿರಿ: ಪರಿಸ್ಥಿತಿ ಕೈ ಮೀರಲು ಬಿಡಬಾರದು: ಪ್ರಶಾಂತ್ ಸಂಬರಗಿಗೆ ಕಿಚ್ಚ ಸುದೀಪ್ ಖಡಕ್ ವಾರ್ನಿಂಗ್..!
ಇದೇ ವೇಳೆ ಎಐಎಡಿಎಂಕೆ ಮತ್ತು ಡಿಎಂಕೆ ಪ್ರಣಾಳಿಕೆಗಳ ನಡುವಿನ ಸಾಮ್ಯತೆಯನ್ನು ಪ್ರಶ್ನಿಸಿದಾಗ ಸಿಎಂ ಪಳನಿಸ್ವಾಮಿ, ಕೃಷಿ ಸಾಲ ಮನ್ನಾ ಮುಂತಾದವುಗಳನ್ನು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಈಗಾಗಲೇ ಘೋಷಿಸಿದ್ದನ್ನು ಸ್ಟಾಲಿನ್ ಈಗ ಭರವಸೆ ನೀಡಿದ್ದಾರೆ ಎಂದರು. (ಏಜೆನ್ಸೀಸ್)