ಕೃಷ್ಣಗಿರಿ: ತಮಿಳುನಾಡಿನ ಕೃಷ್ಣಗಿರಿ ಸಮೀಪದ ಕೊಪ್ಪಚಂದ್ರಂ ಗ್ರಾಮದಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ಇಲ್ಲ ಎಂದು ಹೇಳಿ ಕಾರ್ಯಕ್ರಮವನ್ನು ನಿಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಂದು ಬೆಳಗ್ಗೆ ರಸ್ತೆ ತಡೆ ನಡೆಸಿ ಪ್ರತಿಭಟನೆಗೂ ಇಳಿದಿದ್ದರು. ಆಗ ಪೊಲೀಸರು ಜನರನ್ನು ಲಾಠೀ ಚಾರ್ಜ್ ಮೂಲಕ ಜನರನ್ನು ಒಮ್ಮೆಗೆ ಚದುರಿಸಿದ್ದರು. ಆದರೆ ಇನ್ನೂ ಸಾರ್ವಜನಿಕರ ಆಕ್ರೋಶ ತಣ್ಣಗಾಗಿಲ್ಲ.
ಇದನ್ನೂ ಓದಿ: ಇನ್ನೇನು ಜಲ್ಲಿಕಟ್ಟು ಶುರುವಾಗುತ್ತೆ ಅಂದಾಗ ಅನುಮತಿ ಇಲ್ಲ ಎಂದರು; ಜನರಿಂದ ಪೊಲೀಸರ ಮೇಲೆಯೇ ಕಲ್ಲು ತೂರಾಟ!
ತಮಿಳುನಾಡಿನ ಕೃಷ್ಣಗಿರಿ ಸಮೀಪದ ಕೊಪ್ಪಚಂದ್ರಂ ಗ್ರಾಮದಲ್ಲಿ ಜಲ್ಲಿಕಟ್ಟು ಆಚರಣೆಗೆ ಗ್ರಾಮಸ್ಥರು ಸಿದ್ದತೆ ನಡೆಸಿದ್ದರು. ಜನಪ್ರಿಯ ಜಲ್ಲಿಕಟ್ಟನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಜನರು ಕೂಡ ಆಗಮಿಸಿದ್ದರು. ಜಲ್ಲಿಕಟ್ಟಿನಲ್ಲಿ ಭಾಗವಹಿಸಲು ನೂರಾರು ಸಂಖ್ಯೆಯಲ್ಲಿ ರಾಸುಗಳನ್ನೂ ಜನರು ಸ್ಪರ್ಧೆಗೆ ಕರೆತಂದಿದ್ದರು.
ಆದರೆ ಸ್ಪರ್ಧೆ ಶುರುವಾಗುವ ಕೆಲ ಸಮಯದ ಮುನ್ನ, ಅನುಮತಿ ಇಲ್ಲ ಎಂದು ಪೋಲೀಸರು ಅಡ್ಡಿಪಡಿಸಿದ್ದರು. ಇದರಿಂದ ಆಕ್ರೋಶಗೊಂಡ ಜನರು ಹೆದ್ದಾರಿ ತಡೆ ನಡೆಸಿ ಪೋಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದರು. ವಾಹನಗಳು ಓಡಾಡದಂತೆ ಹೆದ್ದಾರಿಯಲ್ಲಿ ಕಲ್ಲುಗಳನ್ನ ಅಡ್ಡಲಾಗಿಟ್ಟು ಪ್ರತಿಭಟನೆ ಮಾಡಿದ್ದ ಜನರು ಹೆದ್ದಾರಿಯಲ್ಲಿ ಕಲ್ಲು ತೂರಾಟ ನಡೆಸಿ ದಾಂಧಲೆ ಮಾಡಿದ್ದು ವಾಹನಗಳ ಮೇಲೆ ಹತ್ತಿ ಜನರು ಪುಂಡಾಟ ತೋರಿಸಿದ್ದರು.
ಈ ವಿಚಾರವಾಗಿ ಇನ್ನೂ ಸಾರ್ವಜನಿಕರ ಆಕ್ರೋಶ ತಣ್ಣಗಾಗಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೊಲೀಸರ ವಿರುದ್ಧ ಮುಗಿಬಿದ್ದಿದ್ದಾರೆ. ಜನರು ಸಿಕ್ಕ ಸಿಕ್ಕಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದಾರೆ. ಪ್ರತಿಭಟನಾಕಾರರು ಪೊಲೀಸರನ್ನು ಸುತ್ತುವರಿದು ಕಲ್ಲು ತೂರಾಟ ನಡೆಸುತ್ತಿದ್ದು ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಿ ದಾಂಧಲೆ ಮಾಡುತ್ತಿದ್ದಾರೆ. ಹೀಗಾಗಿ ಅಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಟಿಯರ್ ಗ್ಯಾಸ್ ಶೆಲ್ ಪ್ರಯೋಗ ಮಾಡಿದ್ದಾರೆ. ಸದ್ಯ ಗಂಭೀರ ಸ್ವರೂಪದ ಪ್ರತಿಭಟನೆ ನಡೆಯುತ್ತಿರುವ ಪರಿಣಾಮವಾಗಿ ಹೊಸೂರು- ಕೃಷ್ಣಗಿರಿ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.