ನವದೆಹಲಿ: ಈ ಹಿಂದೆ ಭಾರಿ ಸದ್ದು ಮಾಡಿದ್ದ ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸಿದ ದೆಹಲಿಯ ಮಾಜಿ ಕಮಿಷನರ್ ನೀರಜ್ ಕುಮಾರ್, ಸ್ಪೋಟಕ ಸಂಗತಿಯೊಂದನ್ನು ಇದೀಗ ಬಿಚ್ಚಿಟ್ಟಿದ್ದಾರೆ. ಈ ಪ್ರಕರಣದಲ್ಲಿ ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಶ್ರೀಶಾಂತ್ ಭಾಗಿಯಾಗಿದ್ದನ್ನು ಪುನರುಚ್ಚರಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ಶ್ರೀಶಾಂತ್ ಮತ್ತು ಸಹ ಆಟಗಾರರಾದ ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಅವರನ್ನು ಐಪಿಎಸ್ ಅಧಿಕಾರಿ ನೀರಜ್ ಕುಮಾರ್ ನೇತೃತ್ವದಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ಅಂದು ಬಂಧಿಸಿತ್ತು. ಈ ಘಟನೆಯ ಸಮಯದಲ್ಲಿ ನೀರಜ್ ಕುಮಾರ್ ಅವರು ದೆಹಲಿ ಪೊಲೀಸ್ ಕಮಿಷನರ್ ಆಗಿದ್ದರು.
ಬಲವಾದ ಪುರಾವೆಗಳ ಹೊರತಾಗಿಯೂ ಕ್ರೀಡೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಇರುವ ದುರ್ಬಲ ಕಾನೂನುಗಳಿಂದಾಗಿ ಶ್ರೀಶಾಂತ್ ಆರೋಪಮುಕ್ತರಾಗಲು ನೆರವಾಯಿತು. ಭಾರತದಲ್ಲಿ ಕ್ರಿಕೆಟ್ನಲ್ಲಿನ ಭ್ರಷ್ಟಾಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ಗಳು ಈ ವಿಚಾರದಲ್ಲಿ ಬಲವಾದ ಕಾನೂನುಗಳನ್ನು ಹೊಂದಿವೆ. ಕ್ರಿಕೆಟ್ ಶಿಶು ಜಿಂಬಾಬ್ವೆ ಕೂಡ ವಿಶೇಷ ಕಾನೂನನ್ನು ಹೊಂದಿದೆ ಎಂದು ನೀರಜ್ ಕುಮಾರ್ ಹೇಳಿದ್ದಾರೆ.
ಕ್ರೀಡೆಯಲ್ಲಿ ಭ್ರಷ್ಟಾಚಾರವನ್ನು ತೊಡೆದುಹಾಕಲು ನಮ್ಮ ದೇಶದಲ್ಲಿ ಬಲವಾದ ಕಾನೂನುಗಳ ಕೊರತೆಯು ದೊಡ್ಡ ಅಡಚಣೆಯಾಗಿದೆ ಎಂದು ನೀರಜ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ 2013ರ ಮೇ 16ರಂದು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸಹ ಆಟಗಾರರಾದ ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಜೊತೆಗೆ ಶ್ರೀಶಾಂತ್ ಅವರನ್ನು ಬಂಧಿಸಲಾಯಿತು. ಚಾರ್ಜ್ಶೀಟ್ನಲ್ಲಿ ಮೂವರ ವಿರುದ್ಧ ಗಂಭೀರ ಆರೋಪಗಳನ್ನು ಉಲ್ಲೇಖಿಸಲಾಗಿತ್ತು. ವಿಚಾರಣಾ ಕೈದಿಯಾಗಿ ಮೂವರನ್ನು ತಿಹಾರ್ ಜೈಲಿಗೆ ವರ್ಗಾಯಿಸಲಾಗಿತ್ತು. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಬಿಸಿಸಿಐ, ಶ್ರೀಶಾಂತ್ ಅವರಿಗೆ ಜೀವಾವಧಿ ನಿಷೇಧ ಹೇರಿತ್ತು.
ಕೆಲ ವರ್ಷಗಳ ವರೆಗಿನ ಕಾನೂನು ಹೋರಾಟದ ಬಳಿಕ ಈ ಪ್ರಕರಣದಲ್ಲಿ ಶ್ರೀಶಾಂತ್ ಅವರನ್ನು ಸುಪ್ರೀಂಕೊರ್ಟ್ ಖುಲಾಸೆಗೊಳಿಸಿತು. ಅಲ್ಲದೆ, ಬಿಸಿಸಿಐ ಶ್ರೀಶಾಂತ್ ಮೇಲೆ ಹೇರಿದ್ದ ನಿಷೇಧವನ್ನು ಸಹ ತೆಗೆದುಹಾಕಿತು. (ಏಜೆನ್ಸೀಸ್)
ಹೌದು ಆಗ ಆ ರೀತಿ ಹೇಳಿದ್ದೆ ಈಗ ಈ ರೀತಿ ಮಾಡೋದ್ರರಲ್ಲಿ ತಪ್ಪೇನಿದೆ? ಅನುಪಮಾ ಶಾಕಿಂಗ್ ಹೇಳಿಕೆ
ಕಾಂಗ್ರೆಸ್ಗೆ ನಿರೀಕ್ಷಿತ ಫಲಿತಾಂಶ ಬರದಿದ್ದರೆ….! ರಾಹುಲ್ ಗಾಂಧಿಗೆ ಪ್ರಶಾಂತ್ ಕಿಶೋರ್ ಹೀಗೆ ಹೇಳಿದ್ದೇಕೆ?