ಬೆಂಗಳೂರು: ಮಾರ್ಚ್ 22ರಂದು ಆರಂಭವಾಗಲಿರುವ 17ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ತಂಡಗಳು ಅಭ್ಯಾಸದಲ್ಲಿ ನಿರತವಾಗಿವೆ. ಇನ್ನೂ ಈ ಬಾರಿಯ ಐಪಿಎಲ್ ಆಟಗಾರರ ಗಾಯದ ಸಮಸ್ಯೆಯಿಂದಲೇ ಹೆಚ್ಚು ಸದ್ದು ಮಾಡಿದ್ದು, ಅನುಭವಿ ಆಟಗಾರರ ಗೈರು ತಂಡಗಳಿಗೆ ದೊಡ್ಡ ಹಿನ್ನಡೆಯಾಗಬಹುದು ಎಂದು ಹೇಳಲಾಗಿದೆ.
ಈಗಾಗಲೇ ಅಭ್ಯಾಸ್ ಆರಂಭಿಸಿರುವ ಲಖನೌ ಸೂಪರ್ಜೈಂಟ್ಸ್ ತಂಡ ಕಠಿಣ ಅಬ್ಯಾಸ ನಡೆಸುತ್ತಿದ್ದು, ಬಹುತೇಕ ಆಟಗಾರರು ತಂಡವನ್ನು ಕೂಡಿಕೊಂಡಿದ್ದಾರೆ. ಆದರೆ, ಅಭ್ಯಾಸ ಶಿಬಿರದಲ್ಲಿ ಲಖನೌ ಸೂಪರ್ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಕಾಣಿಸಿಕೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಈವರೆಗೆ ಯಾವುದೇ ಸ್ಪಷ್ಟನೆ ದೊರೆತ್ತಿಲ್ಲ.
ಇನ್ನು ಇದಕ್ಕೆ ಪೂರಕವೆಂಬಂತೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ವೇಳೆ ತೊಡೆಸಂಧು ನೋವಿಗೆ ತುತ್ತಾಗಿದ್ದ ರಾಹುಲ್ ಪುನಶ್ಚೇತನಕ್ಕಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಸೇರಿಕೊಂಢಿದ್ದರು. ಇದಕ್ಕೆ ಕಾರಣ ಫಿಟ್ನೆಸ್ ಟೆಸ್ಟ್. ಅಂದರೆ ಐಪಿಎಲ್ ಆಡುವ ಮುನ್ನ ಗಾಯಗೊಂಡಿರುವ ಟೀಮ್ ಇಂಡಿಯಾ ಆಟಗಾರರು ಎನ್ಸಿಎ ಕಡೆಯಿಂದ ಫಿಟ್ನೆಸ್ ಪ್ರಮಾಣಪತ್ರ ಪಡೆಯಬೇಕೆಂದು ಬಿಸಿಸಿಐ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಿದೆ.
ಇದನ್ನೂ ಓದಿ: ಆರ್ಸಿಬಿಗೆ ಬಂತು ಆನೆ ಬಲ; ಬದಲಿ ಆಟಗಾರನಾಗಿ ಮಾರಕ ವೇಗಿ ಎಂಟ್ರಿ
ಈ ನಿಯಮದಂತೆ ಈಗಾಗಲೇ ರಿಷಭ್ ಪಂತ್ ಫಿಟ್ನೆಸ್ ಸರ್ಟಿಫಿಕೇಟ್ ಪಡೆದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಕೆಎಲ್ ರಾಹುಲ್ ಅವರು ಇನ್ನೂ ಸಹ ಎನ್ಸಿಎನಲ್ಲೇ ಉಳಿದಿದ್ದು, ಕಠಿಣ ತಾಲೀಮಿನಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಇದೀಗ ಐಪಿಎಲ್ ಆಡಬೇಕಿದ್ದರೆ ಕೆಎಲ್ಆರ್ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಿದೆ. ಹೀಗಾಗಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿರುವ ರಾಹುಲ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಇನ್ನೆರಡು ದಿನಗಳಲ್ಲಿ ಕೆಎಲ್ ರಾಹುಲ್ ಫಿಟ್ನೆಸ್ ಟೆಸ್ಟ್ಗೆ ಒಳಗಾಗುವ ಸಾಧ್ಯತೆಯಿದ್ದು, ಈ ವೇಳೆ ಸಂಪೂರ್ಣ ಫಿಟ್ ಆಗಿರುವುದು ಸಾಬೀತಾದರೆ ಮಾತ್ರ ಅವರಿಗೆ ಐಪಿಎಲ್ ಆಡಲು ಗ್ರೀನ್ ಸಿಗ್ನಲ್ ಸಿಗಲಿದೆ. ಹೀಗಾಗಿ ಕೆಎಲ್ ರಾಹುಲ್ ಅವರ ಐಪಿಎಲ್ ಭವಿಷ್ಯ ಮುಂದಿನ ಫಿಟ್ನೆಸ್ ಟೆಸ್ಟ್ ಮೇಲೆ ನಿಂತಿದೆ ಎಂದು ಹೇಳಬಹುದಾಗಿದೆ.