ಚೆನ್ನೈ: 17ನೇ ಆವೃತ್ತಿಯ ಐಪಿಎಲ್ಗೆ ದಿನಗಣನೆ ಆರಂಭವಾಗಿದ್ದು, ಅಭಿಮಾನಿಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಉದ್ಘಾಟನಾ ಪಂದ್ಯವನ್ನು ವೀಕ್ಷಿಸಲು ಎದುರು ನೋಡುತ್ತಿದ್ದಾರೆ. ಹೀಗಾಗಿ ಮುಂಬರುವ ಟೂರ್ನಿಗೆ ಈಗಾಗಲೆ ಅಭ್ಯಾಸ ಆರಂಭಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತವರು ಮೈದಾನ ಚೆಪಾಕ್ ಸ್ಟೇಡಿಯಂನಲ್ಲಿ ವಿಶೇಷ ಶಿಬಿರ ಆಯೋಜಿಸಿದೆ.
ಈಗಾಗಲೇ ತಂಡವನ್ನು ಕೂಡಿಕೊಂಡಿರುವ ಎಂ.ಎಸ್. ಧೋನಿ ಅಭ್ಯಾಸ ಆರಂಭಿಸಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಖತ್ ಸದ್ದು ಮಾಡುತ್ತಿವೆ. ಇದೀಗ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ತೊರೆಯಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದ್ದು, ಇದಕ್ಕೆ ಪುಷ್ಠಿ ಎಂಬಂತೆ ಸಿಎಸ್ಕೆ ಮಾಜಿ ಆಟಗಾರನೋರ್ವ ಹೇಳಿಕೆ ಕೊಟ್ಟಿದ್ದಾರೆ.
ಮಾರ್ಚ್ 22 ರಿಂದ ಪ್ರಾರಂಭವಾಗುವ ಈ ಟೂರ್ನಿಯ ಮೊದಲ ಪಂದ್ಯ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಆದರೆ ಈ ಹಿಂದೆ ಸಿಎಸ್ಕೆ ತಂಡವನ್ನು ಪ್ರತಿನಿಧಿಸಿದ್ದ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಅಂಬಾಟಿ ರಾಯುಡು ಶಾಕಿಂಗ್ ಹೇಳಿಕೆ ನೀಡಿದ್ದು, ಈ ಬಾರಿಯ ಐಪಿಎಲ್ ಮಧ್ಯದಲ್ಲಿ ಧೋನಿ ತಂಡದ ನಾಯಕತ್ವವನ್ನು ತೊರೆಯಬಹುದು ಎಂದಿದ್ದಾರೆ.
ಇದನ್ನೂ ಓದಿ: ಬೆಂಗಾಲ್ ಟೈಗರ್ಸ್ ವಿರುದ್ಧ ಭರ್ಜರಿ ಜಯ; ಫಿನಾಲೆಗೆ ಲಗ್ಗೆ ಇಟ್ಟ ಕರ್ನಾಟಕ ಬುಲ್ಡೋಜರ್ಸ್
ಖಾಸಗಿ ವಾಹಿನಿ ಒಂದರ ಸಂದರ್ಶನದಲ್ಲಿ ಮಾತನಾಡಿರುವ ಅಂಬಾಟಿ ರಾಯುಡು, ಪಂದ್ಯಾವಳಿಯಲ್ಲಿ ಕೆಲವು ಪಂದ್ಯಗಳ ನಂತರ ಧೋನಿ ಸಿಎಸ್ಕೆ ತಂಡದ ನಾಯಕತ್ವವನ್ನು ತೊರೆಯಬಹುದು ಮತ್ತು ತಂಡದ ನಾಯಕತ್ವವನ್ನು ಬೇರೆ ಆಟಗಾರನಿಗೆ ಹಸ್ತಾಂತರಿಸಬಹುದು. ಐಪಿಎಲ್ 17ನೇ ಸೀಸನ್ ಬಳಿಕ ಧೋನಿ ಈ ಸ್ವರೂಪಕ್ಕೆ ವಿದಾಯ ಹೇಳುವ ಸಾಧ್ಯತೆಯೂ ಇದೆ. ಐಪಿಎಲ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಯಲ್ಲಿರುವುದರಿಂದ ಧೋನಿ ಈ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ ಸೀಸನ್ ಮಧ್ಯದಲ್ಲಿ ಮತ್ತೊಬ್ಬ ಆಟಗಾರನಿಗೆ ನಾಯಕನಾಗಿ ಬಡ್ತಿ ನೀಡಬಹುದು ಮೊಣಕಾಲಿನ ಗಾಯದ ಹೊರತಾಗಿಯೂ ಕಳೆದ ಸೀಸನ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರು ಇಡೀ ಸೀಸನ್ ಆಡಬೇಕು ಎಂದು ಹೇಳಿದ್ದಾರೆ.
ಒಂದು ವೇಳೆ ಎಂಎಸ್ ಧೋನಿ ನಿವೃತ್ತಿ ನಿರ್ಧರಿಸಿದರೆ ಸಿಎಸ್ಕೆ ತಂಡವನ್ನು ಮುನ್ನಡೆಸಲು ರೋಹಿತ್ ಶರ್ಮಾ ಪ್ರಬಲ ಸ್ಪರ್ಧಿಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ನಾನು ಅವರನ್ನು ಸಿಎಸ್ಕೆಯಲ್ಲಿ ನೋಡಲು ಬಯಸುತ್ತೇನೆ. ಅವರು ಮುಂಬೈ ಇಂಡಿಯನ್ಸ್ಗಾಗಿ ಸಾಕಷ್ಟು ಆಡಿದ್ದಾರೆ ಮತ್ತು ಗೆದ್ದಿದ್ದಾರೆ. ಅವರು ಸಿಎಸ್ಕೆಯಲ್ಲಿಯೂ ಪ್ರಶಸ್ತಿ ಗೆಲ್ಲುವುದನ್ನು ನೋಡಲು ಸಂತೋಷವಾಗುತ್ತದೆ. ನಾಯಕರಾಗಬೇಕೋ ಬೇಡವೋ ಎಂಬುದು ಅವರಿಗೆ ಬಿಟ್ಟದ್ದು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.