ನವದೆಹಲಿ: ಮಾರ್ಚ್ 31ರಂದು ನಡೆಯಲಿರುವ ಡಬಲ್ ಹೆಡರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ಕಿಂಗ್ಸ್ ಮುಖಾಮುಖಿಯಾಗಲಿದ್ದು ಕಾರಣಾಂತರಗಳಿಂದ ಈ ಪಂದ್ಯ ಸ್ಥಳಾಂತರಗೊಂಡಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಬೇಕಿದ್ದ ಈ ಪಂದ್ಯಕ್ಕೆ ಆಂಧ್ರಪ್ರದೇಶದ ವಿಖಾಖಪಟ್ಟಣಂನಲ್ಲಿರುವ ವೈ.ಎಸ್. ರಾಜಶೇಖರ್ ರೆಡ್ಡಿ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಿದೆ.
ಅಂದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ತವರು ಮೈದಾನವಾಗಿ ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂ ಅನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಈ ಮೈದಾನದಲ್ಲಿ ರಿಷಭ್ ಪಂತ್ ಪಡೆ ಸಿಎಸ್ಕೆ ಹಾಗೂ ಕೆಕೆಆರ್ ವಿರುದ್ಧ 2 ಪಂದ್ಯಗಳನ್ನಾಡಲಿದೆ. ಆದರೆ, ಪಂದ್ಯ ಶಿಫ್ಟ್ ಆಗಿರುವುದಕ್ಕೆ ಕಾರಣ ನೀಡಿರುವ ಅಧಿಕಾರಿಗಳು ಡೆಲ್ಲಿ ತಂಡದ ನಿರ್ಧಾರವನ್ನು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಐಪಿಎಲ್ನ ಹಿರಿಯ ಅಧಿಕಾರಿಯೊಬ್ಬರು, ಈ ಪಂದ್ಯಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡದ ತವರು ಮೈದಾನ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಆದರೆ ಇತ್ತೀಚೆಗೆ ಇದೇ ಮೈದಾನದಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ ಅನ್ನು ಆಯೋಜಿಸಲಾಗಿತ್ತು. ನಾಕೌಟ್ ಪಂದ್ಯಗಳು ಸೇರಿದಂತೆ ವುಮೆನ್ಸ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯಕ್ಕೆ ಈ ಸ್ಟೇಡಿಯಂ ಆತಿಥ್ಯವಹಿಸಿತ್ತು.
ಇದನ್ನೂ ಓದಿ: ಹಿರಿಯ ನಟ, ರಂಗಭೂಮಿ ಕಲಾವಿದ ಯೇಸುಪ್ರಕಾಶ್ ಇನ್ನಿಲ್ಲ
ಇತ್ತ ಐಪಿಎಲ್ ಪಂದ್ಯಗಳಿಗೆ ಕ್ರೀಡಾಂಗಣವು ಸಂಪೂರ್ಣ ಸಿದ್ಧವಾಗಿಲ್ಲ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬದಲಿ ಮೈದಾನವನ್ನು ಆಯ್ಕೆ ಮಾಡುವಂತೆ ಬಿಸಿಸಿಐ ಸೂಚಿಸಿದೆ. ಅದರಂತೆ ಪುಣೆ, ವಿಶಾಖಪಟ್ಟಣಂ ಮತ್ತು ಕಟಕ್ ಮೈದಾನಗಳ ಆಯ್ಕೆಗಳನ್ನು ಹೊಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಅಂತಿಮವಾಗಿ ದಕ್ಷಿಣ ಭಾರತದ ಸ್ಟೇಡಿಯಂ ಅನ್ನು ಆಯ್ಕೆ ಮಾಡಿಕೊಂಡಿದೆ.
ಅದರಂತೆ ವಿಖಾಖಪಟ್ಟಣಂದಲ್ಲಿರುವ ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ರಿಷಭ್ ಪಂತ್ ಪಡೆ 2 ಪಂದ್ಯಗಳನ್ನಾಡಲಿದೆ. ಇನ್ನು ಏಪ್ರಿಲ್ 20 ರಂದು ನಡೆಯುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ದೆಹಲಿಯಲ್ಲಿ ಮೊದಲ ಮ್ಯಾಚ್ ಆಡಲಿದೆ ಎಂದು ತಿಳಿಸಿದ್ದಾರೆ.