ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ, ರಂಗಭೂಮಿ ಕಲಾವಿದ ಯೇಸು ಪ್ರಕಾಶ್ ಕಲ್ಲುಕೊಪ್ಪ ಶನಿವಾರ (ಮಾರ್ಚ್ 30) ವಿಧಿವಶರಾಗಿದ್ದಾರೆ. ಮೃತರಿಗೆ 58 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.
ಕಳೆದ ಕೆಲ ದಿನಗಳಿಂದ ತೀವ್ರ ನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದ ಕಾರಣ ಶನಿವಾರ (ಮಾರ್ಚ್ 30) ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಕಿರಾತಕ ಖ್ಯಾತಿಯ ಖಳನಟ ಡ್ಯಾನಿಯಲ್ ಬಾಲಾಜಿ ಇನ್ನಿಲ್ಲ
ತಮ್ಮ ವಿಶಿಷ್ಟ ಅಭಿನಯ ಹಾಗೂ ಧ್ವನಿಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಪ್ರಕಾಶ್ ಪುನೀತ್ ರಾಜ್ಕುಮಾರ್, ಉಪೇಂದ್ರ, ದರ್ಶನ್, ಯಶ್ ಸೇರಿದಂತೆ ಖ್ಯಾತನಾಮರ ಜೊತೆ ತೆರೆ ಹಂಚಿಕೊಂಡಿದ್ದರು. ಸಿನಿಮಾ ಅಲ್ಲದೇ ರಂಗಭೂಮಿಯಲ್ಲೂ ಸಕ್ರಿಯರಾಗಿದ್ದ ಪ್ರಕಾಶ್ ನೀನಾಸಂ ತಂಡದ ನಾಟಕಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಸದ್ಯ ಯೇಸು ಪ್ರಕಾಶ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಶಿವಮೊಗ್ಗದ ಸಾಗರದಲ್ಲಿರುವ ಕಲ್ಲುಕೊಪ್ಪದ (ಪುರಪ್ಪೇಮನೆ) ಅವರ ಸ್ವಗೃಹದಲ್ಲಿ ಸಿದ್ಧತೆ ನಡೆಸಲಾಗಿದೆ. ರಂಗ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಯೇಸು ಪ್ರಕಾಶ್ ನಿಧನಕ್ಕೆ ಕನ್ನಡ ಚಿತ್ರರಂಗದ ತಾರೆಯರು ಕಂಬನಿ ಮಿಡಿದಿದ್ದಾರೆ.