ಬೆಂಗಳೂರು: ಕರೊನಾ ಭೀತಿ ಕಾರಣದಿಂದಾಗಿ ಒಟ್ಟಾಗಿ ಸೇರಲು ಅವಕಾಶವಿಲ್ಲದಿರುವುದರಿಂದ ಜೂ.21ರಂದು ಆನ್ಲೈನ್ನಲ್ಲೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ರಾಜ್ಯದ ಪ್ರತಿಷ್ಠಿತ ಯೋಗ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್ ಸಿದ್ಧತೆ ನಡೆಸಿದ್ದು, ‘ವಿಜಯವಾಣಿ ಹಾಗೂ ದಿಗ್ವಿಜಯ 24×7 ನ್ಯೂಸ್’ ಸಹಯೋಗ ವಹಿಸಲಿದೆ. ಈ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನಾಡಿನ ಜನತೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕರೆ ನೀಡಿದ್ದು, ಶುಭವನ್ನೂ ಹಾರೈಸಿದ್ದಾರೆ.
ರಾಷ್ಟ್ರೋತ್ಥಾನ ಪರಿಷತ್ನಿಂದ ಈವರೆಗೆ ಲಕ್ಷಕ್ಕೂ ಅಧಿಕ ಮಂದಿಗೆ ಯೋಗ ತರಬೇತಿ ನೀಡಲಾಗಿದ್ದು, ಪ್ರತಿ ವರ್ಷ ಯೋಗ ದಿನವನ್ನು ವಿವಿಧ ಜಿಲ್ಲೆಗಳಲ್ಲಿ 15 ಸಾವಿರಕ್ಕೂ ಹೆಚ್ಚು ಜನರ ಜತೆಗೆ ಆಚರಿಸಲಾಗುತ್ತಿತ್ತು. ಆದರೆ ಕರೊನಾ ಆರ್ಭಟ ವ್ಯಾಪಕವಾಗುತ್ತಿರುವ ಈ ವರ್ಷದ ಯೋಗ ದಿನದ ಘೋಷವಾಕ್ಯ, ‘ಮನೆಮನೆಯಲ್ಲಿ ಯೋಗ – ಕುಟುಂಬ ಸದಸ್ಯರೊಂದಿಗೆ ಯೋಗ’ ಇದಕ್ಕೆ ಅನುಗುಣವಾಗಿ ಈ ಕಾರ್ಯಕ್ರಮ ರೂಪಿಸಲಾಗಿದ್ದು, ಈಗಾಗಲೆ ಗೂಗಲ್ ಫಾಮ್ರ್ ಹಾಗೂ ವಾಟ್ಸ್ ಆಪ್ ಮೂಲಕ ಜನರು ನೋಂದಾಯಿಸಿಕೊಂಡಿದ್ದಾರೆ. ಜೂ. 21ರಂದು ಬೆಳಗ್ಗೆ 6.30ರಿಂದ 7.30ರ ವರೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೋತ್ಥಾನ ಪರಿಷತ್ ಆನ್ಲೈನ್ ಮೂಲಕ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದೆ.
1.5 ಲಕ್ಷಕ್ಕೂ ನೋಂದಣಿ: ರಾಜ್ಯದ 13 ಜಿಲ್ಲೆಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದೆ. 30ಕ್ಕೂ ಅಧಿಕ ಶಾಲೆಗಳು, ಯೋಗಕೇಂದ್ರಗಳು, ಜಾಗರಣ, ತಪಸ್-ಸಾಧನಾ ಮುಂತಾದ ಚಟುವಟಿಕೆಗಳ ವಿದ್ಯಾರ್ಥಿಗಳು, ಪೋಷಕರು, ಯೋಗಾಭ್ಯಾಸಿಗಳು ಸೇರಿ 1.5 ಲಕ್ಷ ಮಂದಿ ಈಗಾಗಲೇ ಆನ್ಲೈನ್ ಮೂಲಕ ಈ ಕಾರ್ಯಕ್ರಮಕ್ಕೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.
ಸಾರ್ವಜನಿಕರು, ಯೋಗಾಸಕ್ತರು, ಕುಟುಂಬಗಳು, ಶಾಲಾಕಾಲೇಜುಗಳು, ಯೋಗಸಂಸ್ಥೆಗಳು ಮತ್ತು ಇನ್ನಿತರ ಸಂಘ-ಸಂಸ್ಥೆಗಳು ಗೂಗಲ್ ಫಾಮ್ರ್ ಹಾಗೂ ವಾಟ್ಸ್ಆ್ಯಪ್ ಸಂಖ್ಯೆಗೆ (9481170206) ಹೆಸರು, ದೂರವಾಣಿ ಸಂಖ್ಯೆ, ಸ್ಥಳ, ಪಿನ್ಕೋಡ್, ಭಾಗವಹಿಸುವವರ ಸಂಖ್ಯೆಯನ್ನು ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದು. ರಾಷ್ಟ್ರೋತ್ಥಾನ ಪರಿಷತ್ನ ಅಧಿಕೃತ ಫೇಸ್ಬುಕ್ ಪುಟ https://www.facebook.com/rashtrotthanaparishath ದಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.