ಬೆಂಗಳೂರು: 2020ರಲ್ಲಿ ಕಾಣಿಸಿಕೊಂಡ ಕೋವಿಡ್-19 ಸಾಂಕ್ರಾಮಿಕ ರೋಗದ ಭೀತಿ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ಈ ನಡುವೆ ರಾಜ್ಯದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದ್ದು, ಕುದುರೆಗಳಲ್ಲಿ ಗ್ಲಾಂಡರ್ಸ್ ಡಿಸೀಸ್ (ಗ್ರಂಥಿ ರೋಗ) ಕಾಣಿಸಿಕೊಂಡಿದೆ.
ಬೆಂಗಳೂರು ಉತ್ತರ ಭಾಗದ ಪುಲಿಕೇಶಿನಗರದಲ್ಲಿರುವ ಡಿ.ಜೆ. ಹಳ್ಳಿ ವ್ಯಾಪ್ತಿಯ ಕುದುರೆಯೊಂದರಲ್ಲಿ ಗ್ಲಾಂಡರ್ಸ್ ರೋಗ ದೃಢಪಟ್ಟಿದ್ದು, ರೋಗಗ್ರಸ್ಥ ಕುದುರೆ ಮೃತಪಟ್ಟಿದೆ. ಇತ್ತ ಮತ್ತೊಂದು ಕುದುರೆಯಲ್ಲಿ ಈ ರೋಗ ಕಾಣಿಸಿಕೊಂಡಿದ್ದು, ಪ್ರದೇಶವನ್ನು ಆರೋಗ್ಯ ಇಲಾಖೆ ರೋಗಪೀಡಿತ ವಲಯ ಎಂದು ಘೋಷಿಸಿದೆ.
ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್
ರಾಜ್ಯ ಆರೋಗ್ಯ ಇಲಾಖೆಯು ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ತ್ವರಿತವಾಗಿ ಜಾಗೃತಿ ಮೂಡಿಸುತ್ತಿದೆ. ಸೋಂಕು ಪೀಡಿತ ಮತ್ತೊಂದು ಕುದುರೆಯನ್ನೂ ಕೂಡ ವೈಜ್ಞಾನಿಕವಾಗಿ ಕೊಲ್ಲುವ ಕುರಿತು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ರೋಗಗ್ರಸ್ಥ ಕುದುರೆಯನ್ನು ವೈಜ್ಞಾನಿಕವಾಗಿ ಕೊಲ್ಲುವ ಮುನ್ನ ಅದರ ಮಾಲೀಕರಿಗೆ 25 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತದೆ.
ಈ ಸಂಬಂಧ ಅಧಿಸೂಚನೆ ಹೊರಡಿಸಿರುವ ಆರೊಗ್ಯ ಇಲಾಖೆ, ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಪ್ರಕಾರ, ಬೆಂಗಳೂರು ಉತ್ತರ ತಾಲೂಕಿನ ಡಿಜೆ ಹಳ್ಳಿಯ ಮೋದಿ ರಸ್ತೆಯಲ್ಲಿರುವ ಖಾಲಿದ್ ಷರೀಫ್ ಎಂಬುವವರಿಗೆ ಸೇರಿದ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ಕಾಣಿಸಿಕೊಂಡಿದೆ. ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕ ರೋಗಗಳ ಪ್ರಾಣಿಗಳ ನಿಯಂತ್ರಣ ಕಾಯ್ದೆ-2009 ಅನ್ವಯ ರೋಗ ಗ್ರಸ್ಥ ಕುದುರೆ ಇದ್ದ ಕೇಂದ್ರದಿಂದ 5-ಕಿಮೀ ವ್ಯಾಪ್ತಿಯನ್ನು ‘ಸೋಂಕಿತ ವಲಯ’ ಎಂದು ಘೋಷಿಸಲಾಗಿದೆ ಮತ್ತು 5-25 ಕಿಮೀ ವ್ಯಾಪ್ತಿಯ ಪ್ರದೇಶವನ್ನು ‘ಕಣ್ಗಾವಲು ವಲಯ’ ಎಂದು ಘೋಷಿಸಲಾಗಿದೆ. ಈ ಪ್ರದೇಶದ ಒಳಗೆ ಮತ್ತು ಹೊರಗೆ ಕುದುರೆ, ಕತ್ತೆ ಮತ್ತು ಹೇಸರಗತ್ತೆಗಳ ಚಲನವಲನವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.