ನವದೆಹಲಿ: ಕನ್ನಡತಿ ಎಂಆರ್ ಪೂವಮ್ಮ ಅವರನ್ನು ಒಳಗೊಂಡ ಭಾರತದ 4/400 ಮೀಟರ್ ಮಿಶ್ರ ರಿಲೇ ತಂಡ 2018ರ ಏಷ್ಯನ್ ಗೇಮ್ಸ್ನಲ್ಲಿ ಜಯಿಸಿದ್ದ ರಜತ ಪದಕ ಈಗ ಸ್ವರ್ಣ ಪದಕವಾಗಿ ಮೇಲ್ದರ್ಜೆಗೇರಿದೆ. ಕೂಟದಲ್ಲಿ ಸ್ವರ್ಣ ಪದಕ ಜಯಿಸಿದ್ದ ಬಹರೇನ್ ತಂಡದ ಓರ್ವ ಓಟಗಾರ್ತಿ ಉದ್ದೀಪನ ಪ್ರಕರಣದಲ್ಲಿ ನಿಷೇಧ ಶಿಕ್ಷೆಗೆ ಒಳಗಾಗಿರುವುದು ಇದಕ್ಕೆ ಕಾರಣವಾಗಿದೆ.
ರಾಜೀವ್, ಹಿಮಾದಾಸ್, ಪೂವಮ್ಮ, ಅನಾಸ್ ಏಷ್ಯಾಡ್ ಪದಕ ಗೆಲುವಿನ ಸಂಭ್ರಮದ ಕ್ಷಣ.
ಬಹರೇನ್ ತಂಡದ ಓಟಗಾರ್ತಿ ಕೆಮಿ ಅಡೆಕೊಯ ಉದ್ದೀಪನ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, 4 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಹೀಗಾಗಿ ಬಹರೇನ್ ತಂಡವನ್ನು ಅನರ್ಹಗೊಳಿಸಿ ಸ್ವರ್ಣ ಪದಕವನ್ನು ಈಗ ವಾಪಸ್ ಪಡೆಯಲಾಗಿದ್ದು, ಅದನ್ನು ಕನ್ನಡತಿ ಎಂಆರ್ ಪೂವಮ್ಮ, ಹಿಮಾ ದಾಸ್, ಮೊಹಮದ್ ಅನಾಸ್ ಮತ್ತು ಅರೋಕಿಯಾ ರಾಜೀವ್ ಒಳಗೊಂಡ ಭಾರತ ತಂಡಕ್ಕೆ ನೀಡಲಾಗಿದೆ. ಭಾರತ ತಂಡ 3 ನಿಮಿಷ, 15.71 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿದ್ದರೆ, ಬಹರೇನ್ ತಂಡ ಆಗ 3 ನಿಮಿಷ, 11.89 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಅಗ್ರಸ್ಥಾನ ಪಡೆದಿತ್ತು. ಕರ್ನಾಟಕದ ಅಥ್ಲೀಟ್ ಎಂಆರ್ ಪೂವಮ್ಮ 2018ರ ಜಕಾರ್ತ ಏಷ್ಯಾಡ್ನ ಮಹಿಳೆಯರ 4/400 ಮೀಟರ್ ಓಟದಲ್ಲೂ ಸ್ವರ್ಣ ಪದಕ ಜಯಿಸಿದ್ದರು.
ಇದನ್ನೂ ಓದಿ: ಮೋಟಾರ್ಸ್ಪೋರ್ಟ್ಸ್ಗೆ ಮರಳಲು ಸಜ್ಜಾದ ಆಸೀಸ್ ನೀಲಿಚಿತ್ರ ತಾರೆ!
ಅನು ರಾಘವನ್
ಇನ್ನು ಮಹಿಳೆಯರ 400 ಮೀಟರ್ ಹರ್ಡಲ್ಸ್ನಲ್ಲಿ ಭಾರತದ ಅನು ರಾಘವನ್ಗೆ ಕಂಚಿನ ಪದಕದ ಗೌರವ ಲಭಿಸಿದೆ. ಕೆಮಿ ಅಡೆಕೊಯ ಆ ಸ್ಪರ್ಧೆಯಲ್ಲೂ ಸ್ವರ್ಣ ಜಯಿಸಿದ್ದರು. ಹೀಗಾಗಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಅನು ರಾಘವನ್ಗೆ ಈಗ ಪದಕ ಒಲಿದುಬಂದಿದೆ. ಅನು ರಾಘವನ್ 56.92 ಸೆಕೆಂಡ್ಗಳಲ್ಲಿ ಓಡಿದ್ದರು. ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟದ ಅಧ್ಯಕ್ಷ ಆದಿಲ್ ಸುಮರಿವಾಲಾ ಈ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದ್ದು, ವಿಶ್ವ ಅಥ್ಲೆಟಿಕ್ಸ್ ವೆಬ್ಸೈಟ್ನ ರಾಂಕಿಂಗ್ನಲ್ಲಿ ಈಗ ಭಾರತದ 4/400 ಮೀಟರ್ ರಿಲೇ ತಂಡವನ್ನು ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿ ತೋರಿಸಲಾಗುತ್ತಿದೆ ಎಂದು ಸಂಭ್ರಮಿಸಿದ್ದಾರೆ. ಅಲ್ಲದೆ ಅನು ಅವರಿಗೆ ಪದಕ ಒಲಿದಿರುವುದರಿಂದ ಈಗ ಭಾರತ ಏಷ್ಯಾಡ್ನ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಜಯಿಸಿದ ಒಟ್ಟು ಪದಕಗಳ ಸಂಖ್ಯೆ 20ಕ್ಕೆ (8 ಚಿನ್ನ, 9 ಬೆಳ್ಳಿ, 3 ಕಂಚು)ಏರಿದೆ ಎಂದಿದ್ದಾರೆ.
ಪಾಕಿಸ್ತಾನ ಪರ ಆಡಲು ಬಯಸಿದ್ದ ಇಮ್ರಾನ್ ತಾಹಿರ್ ಪತ್ನಿ ಮಾತು ಕೇಳಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದರು!