ಇಂಡಿ: ಪಟ್ಟಣದಲ್ಲಿನ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಇಂಡಿ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಭಾರತ್ ಗ್ಯಾಸ್ ಬಳಿಯ ವಿಜಯಪುರ ರಸ್ತೆಯಲ್ಲಿ ಸಸಿಗಳನ್ನು ನೆಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.ವೇದಿಕೆಯ ಶ್ರೀಧರ ಕ್ಷತ್ರಿ ಮಾತನಾಡಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ಕೆಲ ರಸ್ತೆಗಳು ಹಾಳಾಗಿದ್ದು, ಮಳೆಯಿಂದಾಗಿ ಹೊಂಡಗಳು ನಿರ್ಮಾಣಗೊಂಡು ಸಂಚಾರಕ್ಕೆ ತೊಂದರೆಯಾಗಿದೆ. ಸ್ಥಳೀಯ ಪುರಸಭೆಯಾಗಲಿ, ಲೋಕೋಪಯೋಗಿ ಇಲಾಖೆಯಿಂದಾಗಲಿ ರಸ್ತೆ ದುರಸ್ತಿ ಮಾಡಿ ಅನುಕೂಲ ಮಾಡಿಕೊಡುತ್ತಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಜಾಣ ಕುರುಡರಂತೆ ಮೌನಕ್ಕೆ ಶರಣಾಗಿರುವುದು ವಿಷಾದನೀಯ ಸಂಗತಿ ಎಂದರು.
ನಾಗೇಶ ಶಿಂದೆ ಮಾತನಾಡಿ, ಶಾಸಕರು ಪ್ರತಿ ಬಾರಿಯೂ ಇಂಡಿ ನಗರ ಬಂಗಾರ ಕಿಂಡಿ ಎಂದು ಹೇಳುತ್ತಿರುತ್ತಾರೆ. ಆದರೆ ಇಂಡಿ ಪಟ್ಟಣದಲ್ಲಿ ಗುಂಡಿಗಳೇ ಬಿದ್ದಿದ್ದು, ಎಲ್ಲಿ ಇಂಡಿ ಬಂಗಾರ ಕಿಂಡಿ ಎಂದು ಪ್ರಶ್ನಿಸಿದರು. ಪಾದಚಾರಿಗಳಿಗೆ ವಾಹನಗಳಿಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ, ಕೂಡಲೇ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರವೀಣ ಮಠ, ವಿನೋದ ಪವಾರ, ಅಖಿಲ ಬಂಕೂರ, ಶಿವಾಜಿ ಸಿಂಧೆ, ಅಕ್ಷಯ ಶಿವೂರ, ಮುತ್ತು ಸಿಂದಗಿ, ಶ್ರೀಶೈಲ ಗೊಂಡಿ, ಸುನೀಲ ಮಾನೆ, ಗಿರೀಶ ಪಾಟೀಲ ಇತರರಿದ್ದರು.
ಇಂಡಿ ಪಟ್ಟಣದ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಇಂಡಿ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ರಸ್ತೆಯಲ್ಲಿ ಸಸಿ ನೆಟ್ಟು ವಿನೂತನವಾಗಿ ಪ್ರತಿಭಟನೆ ನಡೆಸಿದರು. ವೇದಿಕೆಯ ಶ್ರೀಧರ ಕ್ಷತ್ರಿ, ನಾಗೇಶ ಶಿಂದೆ, ಪ್ರವೀಣ ಮಠ, ವಿನೋದ ಪವಾರ, ಅಖಿಲ ಬಂಕೂರ ಇತರರಿದ್ದರು.