ಪಾಕಿಸ್ತಾನ: ತೆಹ್ರೀಕ್ ಎ ಇನ್ಸಾಫ್ ಪಕ್ಷದ ಮುಖ್ಯಸ್ಥ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡದದ್ದು ಎಲ್ಲರಿಗೂ ಗೊತ್ತೇ ಇದೆ. ಬಲಗಾಲಿನಲ್ಲಿ ಗುಂಡೇಟು ತಿಂದ ಇಮ್ರಾನ್ ಖಾನ್ ಬಚಾವಾದದ್ದು ಹೇಗೆ ಎಂಬುದನ್ನು ಅವರೇ ವಿವರಿಸಿದ್ದಾರೆ.
ಹಕೀಕಿ ಆಝಾದಿ ಎನ್ನುವ ಯಾತ್ರೆಯ ಮೂಲಕ ಶೇಬಾಝ್ ಶರೀಫ್ ಸರ್ಕಾರವನ್ನು ವಿರೋಧಿಸುತ್ತಿದ್ದ ಇಮ್ರಾನ್ ಖಾನ್ ವಝೀರಾಬಾದ್ ಎನ್ನುವಲ್ಲಿ ಗುಂಡೇಟನ್ನು ತಿಂದಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಇಮ್ರಾನ್ ‘ಮೊದಲ ಗುಂಡೇಟು ತಾಗಿದ ತಕ್ಷಣ ನಾನು ಕೆಳಗೆ ಬಿದ್ದು ಬಿಟ್ಟೆ. ಇದರಿಂದ ನಾನು ಬಚಾವಾಗಿದ್ದು. ನಂತರ ನಾನು ಸತ್ತ ನಟನೆಯನ್ನು ಮಾಡಿದೆ. ಇಬ್ಬರೂ ದಾಳಿಕೋರರು ಒಟ್ಟಿಗೆ ಗುಂಡು ಹಾರಿಸುತ್ತಿದ್ದರೆ ನಾನು ಬಚಾವಾಗುತ್ತಿರಲಿಲ್ಲ ಏನೋ’ ಎಂದು ಆ ಕ್ಷಣವನ್ನು ನೆನೆಸಿಕೊಂಡರು.
ಇಮ್ರಾನ್, ಎಫ್.ಐ.ಆರ್ನಲ್ಲಿ ಶೇಬಾಝ್ ಶರೀಫ್, ಮೇಜರ್ ಜನರಲ್, ಮತ್ತು ಗೃಹಮಂತ್ರಿಯ ಹೆಸರನ್ನು ಉಲ್ಲೇಖಿಸಿದ್ದಾರೆ. ಅದಕ್ಕೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸರು ದೂರು ದಾಖಲಿಸಲು ಒಪ್ಪುತ್ತಿಲ್ಲ. ಪಾಕ್ ಸರ್ಕಾರದ ಈ ನಡೆಗಳಿಂದಾಗಿ ಜನರ ಮನಸ್ಸಿನಲ್ಲಿ ಇಮ್ರಾನ್ ಖಾನ್ ಜಾಗ ಪಡೆಯುವುದು ಸುಳ್ಳಲ್ಲ. (ಏಜೆನ್ಸೀಸ್)