ದಾವಣಗೆರೆ: ಶಾಸಕ ರೇಣುಕಾಚಾರ್ಯ ತಮ್ಮನ ಮಗ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಂಗತಿ ಬೆಳಕಿಗೆ ಬಂದಿದೆ. ಚಂದ್ರಶೇಖರ್ ಮೊಬೈಲ್ಗೆ ನಿರಂತರವಾಗಿ ಒಂದೇ ನಂಬರ್ನಿಂದ ಹತ್ತಕ್ಕೂ ಹೆಚ್ಚು ಬಾರಿ ಕರೆ ಹಾಗೂ ಮೆಸೇಜ್ ಬಂದಿದೆ. ಚಂದ್ರು ಕಾಣೆಯಾದ ದಿನ, ಅದೂ ರಾತ್ರಿ ಹತ್ತು ಗಂಟೆಯಿಂದ ಹೀಗೆ ಕರೆ ಮತ್ತು ಮೆಸೇಜ್ ಬಂದಿರುವುದಕ್ಕೆ ಕಾರಣ ಏನಿರಬಹುದೆಂಬ ಪ್ರಶ್ನೆ ಎದುರಾಗಿದೆ. ಆ ಮೊಬೈಲ್ ನಂಬರ್ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಂದ್ರು ನಾಪತ್ತೆಯಾದ ಐದನೇ ದಿನಕ್ಕೆ ತುಂಗಾ ಮೇಲ್ದಂಡೆ ಚಾನಲ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಕಾಲ್ ಡೀಟೇಲ್ಸ್ ರೆಕಾರ್ಡ್ (ಸಿಡಿಆರ್) ತೆಗೆಸಿ ನೋಡಿದಾಗ ಅಂದು ರಾತ್ರಿ 10 ಗಂಟೆಯಿಂದ ಒಂದೇ ನಂಬರ್ನಿಂದ ಕರೆ ಬಂದಿರುವುದು ಬಹಿರಂಗವಾಗಿದೆ.
ರಾತ್ರಿ ಹತ್ತು ಗಂಟೆವರೆಗೂ ಗೌರಿ ಗದ್ದೆಯ ವಿನಯ್ ಗುರೂಜಿ ಆಶ್ರಮದಲ್ಲೇ ಚಂದ್ರು ಇದ್ದರು. ಚಿಕ್ಕಮಗಳೂರಿನ ಕೊಪ್ಪದ ವ್ಯಕ್ತಿಯ ಜೊತೆ ಸಂಭಾಷಣೆ ಮಾಡಿದ್ದರು ಎಂಬ ಮಾಹಿತಿಗಳು ಪೊಲೀಸರಿಗೆ ಸಿಕ್ಕಿವೆ. ಈಗ ಆ ಕರೆ ಮಾಡಿದವರು ಯಾರು, ಆತನಿಗೂ ಚಂದ್ರುಗೆ ಏನು ವ್ಯವಹಾರ ಎಂಬ ನಿಗೂಢ ಸಂಗತಿ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.