ನವದೆಹಲಿ: ದೇಶದ ಹಿರಿ-ಕಿರಿಯ ರಾಜಕಾರಣಿಗಳಿಂದ, ಎಲ್ಲ ಪಕ್ಷಗಳ ಮುಖಂಡರಿಂದ ಪ್ರಣಬ್ ದಾ ಎಂದೇ ಕರೆಯಿಸಿಕೊಳ್ಳುತ್ತಿದ್ದರು ಪ್ರಣಬ್ ಮುಖರ್ಜಿ. ಆದರೆ, ಅಂದಿನ ಬಾಂಗ್ಲಾ ಕಾಂಗ್ರೆಸ್ನಲ್ಲಿ ಇವರಿಗಿದ್ದ ಹೆಸರು ಲಿಟಲ್ ಮಾಸ್ಟರ್….!
ಇಂದಿರಾ ಗಾಂಧಿಯವರೊಂದಿಗೆ ಕೆಲಸ ಮಾಡಿದ್ದ ಕಾಂಗ್ರೆಸ್ನ ಕೊನೆಯ ಕೊಂಡಿ ಪ್ರಣಬ್ ದಾ ಮೂಲಕ ಕಳಚಿದಂತಾಗಿದೆ. ಇವರನ್ನು ಕಾಂಗ್ರೆಸ್ನ ತೆಕ್ಕೆಗೆ ಸೆಳೆದಿದ್ದೇ ಸ್ವತಃ ಇಂದಿರಾ ಗಾಂಧಿ ಎಂಬುದು ವಿಶೇಷ.
ಪಶ್ಚಿಮ ಬಂಗಾಳದ ಮಿಡ್ನಾಫುರ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯ ಗಳಿಸಿದ್ದ ಹಿರಿಯ ನಾಯಕ ಕೃಷ್ಣ ಮೆನನ್ ಅವರ ಚುನಾವಣಾ ಎಜೆಂಟ್ ಆಗುವ ಮೂಲಕ ಪ್ರಣಬ್ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿಯಾಗಿದ್ದರು.
ಇದನ್ನೂ ಓದಿ; ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್ ಇನ್ನಷ್ಟು ಹತ್ತಿರ; ಎರಡನೆಯ ಹಂತದ ಪರೀಕ್ಷೆಗೆ ಸಿದ್ಧತೆ
1966ರಲ್ಲಿ ಬಂಗಾಳದಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ ಮತ್ತೊಂದು ಬಣದ ನಾಯಕರಾಗಿದ್ದ ಪ್ರಣಬ್ ಮುಖರ್ಜಿಯವರನ್ನು ಇಂದಿರಾ ಗಾಂಧಿ ರಾಜ್ಯಸಭೆ ಸದಸ್ಯರನ್ನಾಗಿಸಿದರು. ನಂತರ 1970 ರಲ್ಲಿ ಈ ಬಣ ಕಾಂಗ್ರೆಸ್ನಲ್ಲಿ ವಿಲೀನವಾಯಿತು.
1973ರಲ್ಲಿ ಪ್ರಣಬ್ ಮುಖರ್ಜಿ ಮೊದಲ ಬಾರಿಗೆ ಇಂದಿರಾ ಗಾಂಧಿ ಸಂಪುಟದಲ್ಲಿ ಸಚಿವರಾಗಿ ಸೇರ್ಪಡೆಯಾದರು. ಕೈಗಾರಿಕೆ ಖಾತೆಯ ಸಹಾಯಕ ಸಚಿವರಾಗಿ ಇವರಿಗೆ ಹೊಣೆ ನೀಡಲಾಗಿತ್ತು. ಎರಡೇ ವರ್ಷಗಳಲ್ಲಿ ಸ್ವತಂತ್ರ ನಿರ್ವಹಣೆಯ ಕಂದಾಯ ಹಾಗೂ ಬ್ಯಾಕಿಂಗ್ ವ್ಯವಹಾರಗಳ ಉಪ ಸಚಿವರಾಗಿ ಬಡ್ತಿ ಪಡೆದರು.
1982ರಲ್ಲಿ ತುರ್ತು ಪರಿಸ್ಥಿತಿ ಬಳಿಕ ಇಂದಿರಾ ಅಧಿಕಾರಕ್ಕೆ ಮರಳಿದಾಗ ಪ್ರಣಬ್ ಮುಖರ್ಜಿ ಭಾರತದ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಆರ್. ವೆಂಕಟರಾಮನ್ ಅವರನ್ನು ಬದಲಿಗೆ ಈ ಹುದ್ದೆ ಸ್ವೀಕರಿಸಿದ ಖ್ಯಾತಿ ಅವರದ್ದಾಗಿತ್ತು. ಭಾರತದ ಆರ್ಥಿಕ ಕ್ಷೇತ್ರದಲ್ಲಿ ಹಲವು ಮಹತ್ತರ ಬದಲಾವಣೆಗಳಿಗೆ ಪ್ರಣಬ್ ಕಾರಣಕರ್ತರಾದರು.
ಇದನ್ನೂ ಓದಿ; ವಿಡಿಯೋ: ಮೂರು ವರ್ಷದ ಮಗುವನ್ನು 100 ಅಡಿ ಎತ್ತರಕ್ಕೆ ಕೊಂಡೊಯ್ದ ಗಾಳಿಪಟ…!
ಆಡಳಿತಾತ್ಮಕ ಸುಧಾರಣೆ, ಮಾಹಿತಿ ಹಕ್ಕು, ಉದ್ಯೋಗದ ಹಕ್ಕು, ಆಹಾರ ಭದ್ರತೆ, ಇಂಧನ ಭದ್ರತೆ ಮೊದಲಾದ ವಿಚಾರದಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಂಡರು. ಇದಲ್ಲದೇ, ಆಧಾರ್ ಪ್ರಾಧಿಕಾರ, ಮೆಟ್ರೋ ನಿಗಮಗಳ ಸ್ಥಾಪನೆಯಲ್ಲಿಯೂ ಇವರ ಪಾತ್ರವಿದೆ. ಸತತ 23 ವರ್ಷಗಳವರೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಐದು ಬಾರಿ ರಾಜ್ಯಸಭೆ, ಎರಡು ಬಾರಿ ಲೋಕಸಭೆ ಸದಸ್ಯರಾಗಿದ್ದರು. 2012ರಿಂದ 2017ರವರೆಗೆ ಭಾರತದ ರಾಷ್ಟ್ರಪತಿಯಾಗಿ ಸಮರ್ಥವಾಗಿ ಆಡಳಿತ ನಡೆಸಿದರು.