ಬೆಂಗಳೂರು: ಇಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿತ್ತು. ಖ್ಯಾತ ಗಾಯಕರೊಬ್ಬರ ಜಾಗವನ್ನು ಭೂಮಾಫಿಯಾದವರು ಕಬಳಿಸಿದ್ದು, ಅದಕ್ಕೆ ರೋಹಿಣಿ ಸಿಂಧೂರಿ ಕೈಜೋಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಖ್ಯಾತ ಗಾಯಕ ಲಕ್ಕಿ ಅಲಿ ಅವರೇ ಈ ಆರೋಪವನ್ನು ಮಾಡಿದ್ದರು. ಇದೀಗ ಲಕ್ಕಿ ಅಲಿಗೆ ರೋಹಿಣಿ ಸಿಂಧೂರಿ ಉತ್ತರ ನೀಡಿದ್ದಾರೆ.
ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪೊಲೀಸರು ಕ್ರಮ ಜರುಗಿಸುತ್ತಿಲ್ಲ ಎಂದು ಬೇಸರಗೊಂಡ ಲಕ್ಕಿ ಅಲಿ ಸೋಷಿಯಲ್ ಮೀಡಿಯಾ ಮೂಲಕ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಮನವಿ ಮಾಡಿಕೊಂಡಿದ್ದರು. ನಾನು ಮಕ್ಸೂದ್ ಮಹಮೂದ್ ಅಲಿ, ದಿವಂಗತ ಹಿರಿಯ ನಟ ಮಹಮೂದ್ ಅಲಿ ಅವರ ಪುತ್ರ, ನಾನು ಲಕ್ಕಿ ಅಲಿ ಎಂದೂ ಕರೆಯಲ್ಪಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡಿರುವ ಅವರು, ಸದ್ಯ ನಾನು ದುಬೈನಲ್ಲಿದ್ದು, ಇದು ತುರ್ತು ಪ್ರಕರಣ ಎಂದು ನ್ಯಾಯಕ್ಕಾಗಿ ಡಿಜಿಪಿ ಅವರಲ್ಲಿ ಮೊರೆ ಇಟ್ಟಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಿಸಿರುವ ರೋಹಿಣಿ ಸಿಂಧೂರಿ, ಆರೋಪವನ್ನು ಅಲ್ಲಗಳೆದಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ರೋಹಿಣಿ ಸಿಂಧೂರಿ ಪ್ರಕಟಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ‘ಶ್ರೀ ಮಕ್ಸೂದ್ ಎಂ ಅಲಿ ಅಲಿಯಾಸ್ ಲಕ್ಕಿ ಅಲಿಯವರ ಆರೋಪ ಸುಳ್ಳು ಮತ್ತು ಆಧಾರರಹಿತ ಆಗಿದ್ದು ನಾನು ಇದರಿಂದ ಆಶ್ಚರ್ಯ ಹಾಗೂ ಆಘಾತಕ್ಕೊಳಗಾಗಿದ್ದೇನೆ. ಈ ಪ್ರಕರಣದಲ್ಲಿ ನಾನು ಯಾವುದೇ ಪಾತ್ರ ಹೊಂದಿಲ್ಲ. ಆದರೂ ದುರುದ್ದೇಶದಿಂದ ನನ್ನನ್ನು ಈ ವಿಷಯದಲ್ಲಿ ಅನಗತ್ಯವಾಗಿ ಎಳೆಯಲಾಗುತ್ತಿದೆ. OS ಸಂಖ್ಯೆ 5592/2016 ರಲ್ಲಿ ಲಕ್ಕಿ ಅಲಿ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ಇದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ವಿಷಯವು ನ್ಯಾಯದ ಅಧೀನವಾಗಿ ಉಳಿದಿದೆ. ನಾನು ಶ್ರೀ ಅಲಿ ಅವರ ಕಲೆಯನ್ನು ಗೌರವಿಸುತ್ತೇನೆ. ಆದರೆ ನ್ಯಾಯಾಲಯಗಳು ಈ ವಿಷಯವನ್ನು ಕೈಗೆತ್ತಿಕೊಂಡಿರುವಾಗ ಇದು ಸಂಪೂರ್ಣವಾಗಿ ಅನಗತ್ಯ ಎಂದು ನಾನು ಭಾವಿಸುತ್ತೇನೆ. ನನ್ನ ಹೆಸರನ್ನು ಹಾಳು ಮಾಡಲು ಮತ್ತು ಸಾರ್ವಜನಿಕರ ಅನುಕಂಪ ಗಳಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ. ನಾನು ಎಲ್ಲಾ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗುತ್ತಿದ್ದೇನೆ’ ಎಂದು ಬರೆದಿದ್ದಾರೆ.