ಬೆಳಗಾವಿ: ರಾಜ್ಯದಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಉಲ್ಬಣಿಸಿದೆ. ಈ ಹಿಂದೆ ಕರ್ನಾಟಕಕ್ಕೆ ಬರಲಿರುವ ಮಹಾರಾಷ್ಟ್ರ ಸಚಿವರಿಗೆ ಇಲ್ಲಿಗೆ ಆಗಮಿಸಲು ಬಿಡಬಾರದು ಎಂದು ಬೆಳಗಾವಿ ಪೊಲೀಸ್ ಕಮಿಷನರ್ಗೆ ಮನವಿ ಮಾಡಲಾಗಿತ್ತು. ಈಗ ಬೆಳಗಾವಿಯ ಜಿಲ್ಲಾಧಿಕಾರಿ, ಮಹಾರಾಷ್ಟ್ರದ ಸಚಿವರು ಬೆಳಗಾವಿ ಜಿಲ್ಲೆಯ ಗಡಿ ದಾಟಬಾರದು ಎಂದು ನಿರ್ಬಂಧ ಹೇರಿದ್ದಾರೆ.
ಮಹಾರಾಷ್ಟ್ರ ಮೂವರು ಸಚಿವರು ನಾಳೆ ಬೆಳಗಾವಿಗೆ ಆಗಮನ ಹಿನ್ನಲೆಯಲ್ಲಿ ಮಹಾರಾಷ್ಟ್ರ ಮೂರು ಸಚಿವರಿಗೆ ಬೆಳಗಾವಿ ಜಿಲ್ಲೆಗಡಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಜಿಲ್ಲಾಧಿಕಾರಿ ಡಾ. ನಿತೇಶ್ ಪಾಟೀಲ್ ಈ ಆದೇಶವನ್ನು ಜಾರಿ ಮಾಡಿದ್ದಾರೆ.
ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಆಗಮಿಸಿ ಪ್ರಚೋದನಕಾರಿ ಭಾಷಣ ಮಾಡಿ ಶಾಂತಿಗೆ ಭಂಗ ತರುವ ಸಾಧ್ಯತೆ ಇದೆ ಎಂದು ಗಡಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಆದೇಶವನ್ನು ಜಿಲ್ಲಾಧಿಕಾರಿ ಹೊರಡಿಸಿದ್ದಾರೆ. ಮಹಾರಾಷ್ಟ್ರದ ಸಚಿವ ಚಂದ್ರಕಾಂತ ಪಾಟೀಲ, ಶಂಭುರಾಜೆ ದೇಸಾಯಿ, ಮತ್ತು ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಈ ಮೂರು ಸಚಿವರಿಗೆ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ.
ಬೆಳಗಾವಿಯ ಎಂಇಎಸ್ ಪುಂಡರ ಮನವಿ ಮೇರೆಗೆ ನಾಳೆ ಬೆಳಗಾವಿಗೆ ಆಗಮಿಸಲು ಮಹಾರಾಷ್ಟ್ರ ಸಚಿವರು ಸಜ್ಜಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಈ ನಿರ್ಬಂಧ ಆದೇಶವನ್ನು ಜಾರಿಗೊಳಿಸಿದ್ದಾರೆ.