ಹೈದರಾಬಾದ್: ಸೈರನ್ ಮೊಳಗುತ್ತಿದ್ದ ಕಾರಣ ತುರ್ತುಪರಿಸ್ಥಿತಿ ಅಂತ ತಿಳಿದು ಟ್ರಾಫಿಕ್ ಸರಿಪಡಿಸಿ, ಹೋಗಲು ದಾರಿ ಮಾಡಿಕೊಟ್ಟರೆ, ಆಂಬ್ಯುಲೆನ್ಸ್ ಚಾಲಕ ರಸ್ತೆ ಬದಿಯಲ್ಲಿ ಆಂಬ್ಯುಲೆನ್ಸ್ ನಿಲ್ಲಿಸಿ, ಪಕ್ಕದ ಅಂಗಡಿಯಲ್ಲಿ ಸ್ನ್ಯಾಕ್ಸ್ ಸವಿದಿರುವ ಆಘಾತಕಾರಿ ಘಟನೆ ಮಂಗಳವಾರ (ಜು.11) ತೆಲಂಗಾಣದಲ್ಲಿ ನಡೆದಿದೆ.
ತಾನು ದಾರಿ ಮಾಡಿಕೊಟ್ಟ ಆಂಬ್ಯುಲೆನ್ಸ್ ಆಸ್ಪತ್ರೆಗೆ ಹೋಗದೆ ರಸ್ತೆ ಬದಿಯ ಬೇಕರಿಯಲ್ಲಿ ನಿಂತಿರುವುದನ್ನು ನೋಡಿ, ಅಲ್ಲಿಗೆ ಟ್ರಾಫಿಕ್ ಪೊಲೀಸ್ ಹೋಗಿ ಪರಿಶೀಲಿಸಿದ್ದಾರೆ. ಆದರೆ, ಆಂಬ್ಯುಲೆನ್ಸ್ ಒಳಗೆ ಯಾವೊಬ್ಬ ರೋಗಿಯು ಸಹ ಇರಲಿಲ್ಲ. ತುರ್ತು ಪರಿಸ್ಥಿತಿಯಲ್ಲದ ಸಮಯದಲ್ಲೂ ಚಾಲಕ ಆಂಬ್ಯುಲೆನ್ಸ್ ಸೈರನ್ ಆನ್ ಮಾಡಿರುವುದು ಕಂಡುಬಂದಿದೆ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಗಂಭೀರ ಚರ್ಚೆ ನಿರೀಕ್ಷಿತ: ಅಧಿವೇಶನದಲ್ಲಿ ವೈಯಕ್ತಿಕ ಆರೋಪ, ಜಟಾಪಟಿ
ಆಂಬ್ಯುಲೆನ್ಸ್ನಲ್ಲಿ ತುರ್ತು ರೋಗಿ ಯಾರು ಇರಲಿಲ್ಲ. ಅದರಲ್ಲಿ ಇಬ್ಬರು ನರ್ಸ್ ಸೇರಿ ಇತರರು ಇದ್ದರು ಎಂದು ಪೊಲೀಸ್ ಸಿಬ್ಬಂದಿ ಹೇಳಿದರು. ಈ ಘಟನೆ ಸೋಮವಾರ ರಾತ್ರಿ ಹೈದರಾಬಾದ್ನ ಬಶೀಬಾಘ್ ಜಂಕ್ಷನ್ನಲ್ಲಿ ನಡೆದಿದೆ. ಸೈರನ್ ಮೊಳಗುತ್ತಿರುವುದನ್ನು ನೋಡಿ, ತುರ್ತು ಪರಿಸ್ಥಿತಿ ಇರಬಹುದು ಅಂತ ಭಾವಿಸಿ, ಸಂಚಾರಿ ಪೊಲೀಸ್ ತಕ್ಷಣ ಆಂಬ್ಯುಲೆನ್ಸ್ ಹೊರಡಲು ದಾರಿ ಮಾಡಿಕೊಟ್ಟರು. ಆದರೆ, ಟ್ರಾಫಿಕ್ ಸಿಗ್ನಲ್ನಿಂದ 100 ಮೀಟರ್ ದೂರದಲ್ಲಿರುವ ಬೇಕರಿಯೊಂದರ ಬಳಿ ಆಂಬ್ಯುಲೆನ್ಸ್ ನಿಂತಿತ್ತು. ಇದನ್ನು ನೋಡಿದ ಪೊಲೀಸ್ ಸ್ಥಳಕ್ಕೆ ತೆರಳಿದ್ದಾರೆ. ಬಳಿಕ ಚಾಲಕನನ್ನು ಪೊಲೀಸ್ ಸಿಬ್ಬಂದಿ ಪ್ರಶ್ನೆ ಮಾಡಿರುವುದು ಅವರು ಧರಿಸಿದ್ದ ಬಾಡಿ ವೋರ್ನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಆಂಬ್ಯುಲೆನ್ಸ್ ಚಾಲಕ ಕೈಯಲ್ಲಿ ಜ್ಯೂಸ್ ಬಾಟೆಲ್ ಹಿಡಿದು, ನರ್ಸ್ ಒಬ್ಬರಿಗೆ ಅನಾರೋಗ್ಯ ಇದೆ ಎಂದು ಮಾತನಾಡಿರುವುದನ್ನು ಕೇಳಬಹುದು.
ಕಠಿಣ ಕ್ರಮ ಆಗಲಿದೆ
ನೀನು ಸೈರನ್ ಹಾಕಿರುವಾಗ ಎಮರ್ಜೆನ್ಸಿ ಅಂತ ತಿಳಿದು ನಾನು ನಿನಗೆ ದಾರಿ ಮಾಡಿಕೊಟ್ಟರೆ, ನೀನು ಆಸ್ಪತ್ರೆಗೆ ಹೋಗದೆ, ಮಿರ್ಚಿ ಬಜ್ಜಿ ತಿನ್ನುತ್ತಾ ಟೀ ಕುಡಿಯುತ್ತಿದೆಯಲ್ಲ ಇದು ಸರಿನಾ ಎಂದು ಪೊಲೀಸ್ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ. ರೋಗಿ ಎಲ್ಲಿ? ಮಿರ್ಚಿ ಬಜ್ಜಿ ತಿನ್ನುವುದಕ್ಕಾಗಿ ಸೈರೆನ್ ಆನ್ ಮಾಡಿದೆಯಾ? ನಾನು ಈ ಸಂಬಂಧ ವರದಿ ತಯಾರಿಸಿ, ಉನ್ನತ ಅಧಿಕಾರಿಗಳಿಗೆ ಕಳುಹಿಸುತ್ತೇನೆ ಮತ್ತು ನಿಮ್ಮ ಮೇಲೆ ಕಠಿಣ ಕ್ರಮ ಆಗಲಿದೆ ಎಂದು ಪೊಲೀಸ್ ಸಿಬ್ಬಂದಿ ತರಾಟೆಗೆ ತೆಗೆದುಕೊಂಡಿರುವುದು ವಿಡಿಯೋದಲ್ಲಿದೆ.
ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಇದೇ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಚಾಲಕನಿಗೆ 1000 ರೂಪಾಯಿ ದಂಡವನ್ನು ವಿಧಿಸಲಾಗಿದೆ.
ದುರುದ್ದೇಶದಿಂದ ಸೈರನ್ ಬಳಕೆ
ಇದೇನು ತುರ್ತು ಪರಿಸ್ಥಿತಿ ಅಲ್ಲ ಮತ್ತು ಆಂಬ್ಯುಲೆನ್ಸ್ ಡ್ರೈವರ್ ಸೈರನ್ ಬಳಸಬಾರದಿತ್ತು. ತುರ್ತು ವೇಳೆಯಾಗಿದ್ದರೆ ಆತ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಆತ ಆ ರೀತಿ ಮಾಡಲಿಲ್ಲ. ಬದಲಾಗಿ ರಸ್ತೆ ಬದಿಯ ಬೇಕರಿಯಲ್ಲಿ ಸ್ನ್ಯಾಕ್ಸ್ ತಿನ್ನುತ್ತಿದ್ದರು. ಟ್ರಾಫಿಕ್ ಕ್ಲಿಯರೆನ್ಸ್ ಪಡೆಯುವದಕ್ಕಾಗಿ ದುರುದ್ದೇಶದಿಂದ ಸೈರನ್ ಹಾಕಿದರು ಎಂದು ಉಪ ಪೊಲೀಸ್ ಆಯುಕ್ತ (ಸಂಚಾರ-I) ರಾಹುಲ್ ಹೆಗ್ಡೆ ಪಿಟಿಐಗೆ ತಿಳಿಸಿದ್ದಾರೆ.
ಈ ದುರುಪಯೋಗದ ಬಗ್ಗೆ ನಾವು ಆಸ್ಪತ್ರೆಗೂ ಸಹ ತಿಳಿಸುತ್ತೇವೆ. ಈ ರೀತಿಯ ಘಟನೆ ಮರುಕುಳಿಸಿದರೆ, ಉಲ್ಲಂಘನೆ ಅಥವಾ ಗಂಭೀರ ಉಲ್ಲಂಘನೆ ಕಂಡುಬಂದರೆ, ಅಂತವರ ವಿರುದ್ಧ ನಾವು ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ ಎಂದು ಡಿಸಿಪಿ ಎಚ್ಚರಿಸಿದರು.
ಇದನ್ನೂ ಓದಿ: ಅಂತಾರಾಷ್ಟ್ರೀಯ ವಿಶೇಷ ಒಲಿಂಪಿಕ್ಸ್ನ ಸೈಕ್ಲಿಂಗ್ ಸ್ಪರ್ಧೆ- ದಾವಣಗೆರೆಯ ಸುಶ್ರುತ್ ಗೆ ಚಿನ್ನ
ತೆಲಂಗಾಣ ಡಿಜಿಪಿ ಟ್ವೀಟ್
ತೆಲಂಗಾಣ ಪೊಲೀಸರು ಆಂಬ್ಯುಲೆನ್ಸ್ ಸೇವೆಗಳ ಜವಾಬ್ದಾರಿಯುತ ಬಳಕೆಯನ್ನು ಒತ್ತಾಯಿಸುತ್ತಾರೆ. ನಿಜವಾದ ತುರ್ತುಸ್ಥಿತಿಗಳು ತ್ವರಿತ ಮತ್ತು ಸುರಕ್ಷಿತ ಮಾರ್ಗಕ್ಕಾಗಿ ಸೈರನ್ಗಳನ್ನು ಸಕ್ರಿಯಗೊಳಿಸುವ ಅಗತ್ಯವಿದೆ. ದುರುಪಯೋಗ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ ಎಂದು ತೆಲಂಗಾಣ ಡಿಜಿಪಿ ಅಂಜನಿ ಕುಮಾರ್ ತಿಳಿಸಿದ್ದಾರೆ. (ಏಜೆನ್ಸೀಸ್)
#TelanganaPolice urges responsible use of ambulance services, citing misuse of sirens. Genuine emergencies require activating sirens for swift and safe passage. Strict action against abusers is advised.
Together, we can enhance emergency response and community safety. pic.twitter.com/TuRkMeQ3zN
— Anjani Kumar IPS (@Anjanikumar_IPS) July 11, 2023
ಕಲಾಪದಲ್ಲಿ ವ್ಯವಹಾರ ಕದನ: ಆಡಳಿತ-ಪ್ರತಿಪಕ್ಷದ ನಡುವೆ ಮಾತಿನ ಘರ್ಷಣೆ; ವರ್ಗಾವಣೆ ದಂಧೆ ವಿಚಾರಕ್ಕೆ ಗದ್ದಲ
ಪ್ರಕೃತಿಗೆ ಟಿಶ್ಯೂ ದೊಡ್ಡ ಇಶ್ಯೂ: ನಿಯಂತ್ರಣಕ್ಕೆ ಕರವಸ್ತ್ರವೇ ಅಸ್ತ್ರ..