ಹುಬ್ಬಳ್ಳಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಧಾರ್ಮಿಕ ವಿಧಿವಿಧಾನಗಳು ಅರಂಭಗೊಂಡಿವೆ. ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಕ್ತರು ಕಾತುರದಿಂದ ಕಾಯುತ್ತಿದ್ದು, ಕರ್ನಾಟಕಕ್ಕೂ ಹಾಗೂ ಅಯೋದ್ಯೆಗೂ ಅವಿನಾಭಾವ ಸಂಬಂಧ ಇದೆ ಎಂದು ಹೇಳಬಹುದಾಗಿದೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿದ್ದು, ಇದೀಗ ಹುಬ್ಬಳ್ಳಿಯ ಯುವಕನಿಗೆ ಅಯೋಧ್ಯೆಯಲ್ಲಿ ಭರತನಾಟ್ಯ ಪ್ರದರ್ಶನಕ್ಕೆ ಆಹ್ವಾನ ನೀಡಲಾಗಿದೆ. ರಾಮಮಂದಿರ ಉದ್ಘಾಟನೆಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹುಬ್ಬಳ್ಳಿಯ ವಿದ್ವಾನ್ ಸುಜಯ್ ಶಾನ್ಭಾಗ್ ಅವರಿಗೆ ಆಹ್ವಾನ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿದ್ವಾನ್ ಸುಜಯ್ ಶಾನ್ಬಾಗ್, ಮೈಸೂರಿನ ವಸುಂಧರ ದೊರೆಸ್ವಾಮಿಯವರ ನೇತೃತ್ವದಲ್ಲಿ ‘ಶ್ರೀರಾಮಂ ಭಜೆ’ ಅಂತ ನೃತ್ಯ ಸಮರ್ಪಣೆಯಾಗಲಿದೆ.ಹಿರಿಯ ಶಿಷ್ಯನಾಗಿ ಅವರ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದೇನೆ. ಜನವರಿ 25ರಂದು ಭರತನಾಟ್ಯ ಪ್ರದರ್ಶನ ನೀಡಲಾಗುವುದು ಎಂದು ವಿದ್ವಾನ್ ಸುಜಯ್ ಶಾನ್ಭಾಗ್ ತಿಳಿಸಿದ್ದಾರೆ.