ಹೊನ್ನಾಳಿ: ತಾಲೂಕಿನ ಸೋಮನಮಲ್ಲಾಪುರ ಗ್ರಾಮದಲ್ಲಿ ಆಂಜನೇಯ, ರಂಗನಾಥಸ್ವಾಮಿ ದೇವರ ರಥೋತ್ಸವ ಸೋಮವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ರಥೋತ್ಸವ ಭಕ್ತರು ಬಾಳೆಹಣ್ಣು, ಉತ್ತುತ್ತಿ, ಮಂಡಕ್ಕಿ ತೂರಿ ಭಕ್ತಿ ಸಮರ್ಪಿಸಿದರು. ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಥೋತ್ಸವದಲ್ಲಿ ಸೊರಟೂರು ಹನುಮಂತ ದೇವರ ಬೃಹತ್ ಗಾತ್ರದ ಪಾದುಕೆಗಳ ಮೆರವಣಿಗೆ ನಡೆಯಿತು.
ಏಪ್ರಿಲ್ 24ರಂದು ಷಷ್ಠಿ ಗಣಪತಿ ಪೂಜೆ, ಸೂರ್ಯದೇವರಿಗೆ ಅರ್ಘ್ಯಪೂಜೆ ಮತ್ತು ಧ್ವಜಾರೋಹಣ, ರಂಗನಾಥಸ್ವಾಮಿಗೆ ಕಂಕಣಧಾರಣೆ ಕಾರ್ಯಕ್ರಮ ನಡೆದಿದ್ದು, 28ರಂದು ಆಂಜನೇಯ, ರಂಗನಾಥ, ಕಲ್ಲುಕಟ್ಟೆ ಸ್ವಾಮಿಗೆ ರುದ್ರಾಭಿಷೇಕ, ನವಗ್ರಹ ಪೂಜೆ, ರಾತ್ರಿ ಹೂವಿನ ತೇರು ನಡೆಯಿತು.
ನಂತರ ಬಾಸಿಂಗ ಧಾರಣೆ ಹಾಗೂ ರಥೋತ್ಸವಕ್ಕೆ ಕಳಸಾರೋಹಣ ನಡೆದವು. ಗ್ರಾಮದ ಹಿರಿಯ ಮುಖಂಡ ಓಂಕಾರಪ್ಪ ಇತರರಿದ್ದರು.