ಚೆನ್ನೈ: ಭಾಷೆಯ ವಿಚಾರಕ್ಕಾಗಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಅರ್ಥಾತ್, ಹಿಂದಿ ಹೇರಿಕೆಯನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭ ವ್ಯಕ್ತಿಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರಿಂದಾಗಿ ಸಾವಿಗೀಡಾಗಿದ್ದಾರೆ.
ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ಸಮೀಪದ ತಝೈಯೂರ್ ಎಂಬಲ್ಲಿನ ಡಿಎಂಕೆ ಪಕ್ಷದ ಕಚೇರಿ ಬಳಿ ಈ ಪ್ರಕರಣ ನಡೆದಿದೆ. ಸಾವಿಗೀಡಾದ ಪ್ರತಿಭಟನಾಕಾರನನ್ನು ಡಿಎಂಕೆ ಕಾರ್ಯಕರ್ತ ತಂಗವೇಲು (85) ಎಂದು ಗುರುತಿಸಲಾಗಿದೆ.
ತಮಿಳುನಾಡಿನಾದ್ಯಂತ ಶಾಲೆ-ಕಾಲೇಜುಗಳಲ್ಲಿ ಹಿಂದಿಯನ್ನು ಮಾಧ್ಯಮವಾಗಿ ಅಳವಡಿಸಲು ಮುಂದಾಗಿರುವ ನಡೆಯನ್ನು ವಿರೋಧಿಸಿ ಇಂದು ಡಿಎಂಕೆ ಕಚೇರಿ ಬಳಿ ಪ್ರತಿಭಟನೆ ನಡೆದಿದ್ದು, ಈ ವೇಳೆ ತಂಗವೇಲು ಹಿಂದಿ ಹೇರಿಕೆಯನ್ನು ಖಂಡಿಸಿ ಘೋಷಣೆ ಕೂಗಿದ್ದಲ್ಲದೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು.
ಪಕ್ಷದ ಕಾರ್ಯಕರ್ತರು ಕೂಡಲೇ ಬೆಂಕಿ ಆರಿಸಲು ಮುಂದಾಗಿ ರಕ್ಷಣೆ ಮಾಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ತಂಗವೇಲು ಸ್ಥಳದಲ್ಲೇ ಸಾವಿಗೀಡಾದರು. ‘ಇಲ್ಲಿ ತಮಿಳು ಭಾಷೆ ಇರುವಾಗ ಹಿಂದಿಯನ್ನು ಹೇರುವ ಅಗತ್ಯವಿಲ್ಲ’ ಎಂದು ಕೇಂದ್ರ ಸರ್ಕಾರವನ್ನು ಉದ್ದೇಶಿಸಿ ಬರೆದಿರುವ ಚೀಟಿ ಕೂಡ ಸ್ಥಳದಲ್ಲಿ ಸಿಕ್ಕಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ.
ಹಿಂದಿಯನ್ನು ಹೇರಿದರೆ ಇಲ್ಲಿನ ಬಹಳಷ್ಟು ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಂಗವೇಲು ಈ ಹಿಂದೆಯೇ ಪಕ್ಷದ ಸ್ಥಳೀಯ ಘಟಕಕ್ಕೆ ಪತ್ರ ಬರೆದಿದ್ದರು. ತಂಗವೇಲು ಸಾವಿನ ಸಂಬಂಧ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಈ ಕುರಿತು ಸಂತಾಪ ಸೂಚಿಸಿದ್ದಾರೆ. ಹಿಂದಿ ಹೇರಿಕೆ ವಿಚಾರಕ್ಕೆ ಪಕ್ಷ ಹಲವಾರು ಕಾರ್ಯಕರ್ತರನ್ನು ಕಳೆದುಕೊಂಡಿದೆ, ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು ಮತ್ತು ಹಿಂದಿ ಹೇರಿಕೆ ವಿರುದ್ಧ ಪಕ್ಷದ ವಿರೋಧ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.
ಮಗನಿಗಾಗಿ ಎರಡೇ ತಿಂಗಳಲ್ಲಿ ಹತ್ತು ಕೆ.ಜಿ. ತೂಕ ಕಳೆದುಕೊಂಡ ತಂದೆ; ಕಾರಣವಿದು…
ಗಣಿತದ ಟೇಬಲ್ ಹೇಳಿಲ್ಲ ಎಂದು ವಿದ್ಯಾರ್ಥಿ ಕೈಗೆ ಡ್ರಿಲ್ಲಿಂಗ್ ಮಷಿನ್ ಇಟ್ಟು ಗಾಯಗೊಳಿಸಿದ ಟೀಚರ್!