ಹಾಸನ: ಇತ್ತೀಚಿನ ವರ್ಷಗಳಲ್ಲಿ ಸೈಬರ್ ವಂಚಕರ ಹಾವಳಿ ಮಿತಿಮೀರಿದ್ದು, ಎಷ್ಟೇ ಎಚ್ಚರ ವಹಿಸಿದರು ಒಂದಲ್ಲ ಒಂದು ರೀತಿ ಜನ ವಂಚಕರ ಗಾಳಕ್ಕೆ ಬಿದ್ದು, ಹಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಖದೀಮರು ಡಿವೈಎಸ್ಪಿಯೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಕಿ ಅವರ ಅರಿವಿಗೆ ಬಾರದಂತೆ 15,98,761 ರೂ. ವರ್ಗಾವಣೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಹಾಸನ ಉಪವಿಭಾಗದ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಪಿ.ಕೆ.ಮುರಳೀಧರ್ ಅವರ ಎರಡು ಬ್ಯಾಂಕ್ ಖಾತೆಗಳಿಂದ ವಂಚಕರು 15,98,761 ರೂ. ವರ್ಗಾವಣೆ ಮಾಡಿಕೊಂಡಿದ್ದಾರೆ. ಈಗ ಅಧಿಕಾರಿಯೇ ಹಣವನ್ನು ಕಳೆದುಕೊಂಡು ಸ್ವತಃ ದೂರಿನೊಂದಿಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ಧೋನಿ-ರೋಹಿತ್-ಕೊಹ್ಲಿ ಕೈಯಲ್ಲಿ ಸಾಧ್ಯವಾಗದ ದಾಖಲೆಯನ್ನು ನಿರ್ಮಿಸಿದ ಶ್ರೇಯಸ್ ಅಯ್ಯರ್
ಡಿವೈಎಸ್ಪಿ ಮುರಳೀಧರ್ ಅವರು ಮಡಿಕೇರಿ ಹಾಗೂ ಭಾಗಮಂಡಲದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಖಾತೆಯನ್ನು ಹೊಂದಿದ್ದು, ಮೇ 20 ರಂದು ಮಧ್ಯಾಹ್ನ 1:30ರ ಸಮಯದಲ್ಲಿ ಇವರ ಫೋನ್ಗೆ ಬಂದ ಮೆಸೇಜ್ಗಳನ್ನು ನೋಡಿ ಅಘಾತಕ್ಕೊಳಗಾಗಿದ್ದಾರೆ. ಆ ಮೆಸೇಜ್ಗಳ ಮೂಲಕ ಖದೀಮರ ಕೈಚಳಕ ಬೆಳಕಿಗೆ ಬಂದಿದೆ. ಡಿವೈಎಸ್ಪಿ ಅವರ ಗಮನಕ್ಕೆ ಬಾರದೆ ಈ ಎರಡೂ ಖಾತೆಗಳಿಂದ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ.
ಎರಡು ಬ್ಯಾಂಕ್ ಖಾತೆಗಳಿಂದ 15,98,761 ರೂ. ಗಳನ್ನು ವಂಚಕರು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಾಸನದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿರುವ ಡಿವೈಎಸ್ಪಿ, ಆನ್ಲೈನ್ ಖದೀಮರನ್ನು ಪತ್ತೆ ಮಾಡಿ ಹಣ ವಾಪಸ್ ಕೊಡಿಸುವಂತೆ ಮತ್ತು ಖದೀಮರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.