More

    ಸಮಾಜಕ್ಕೆ ತೆರೆದುಕೊಳ್ಳುವ ಶಿಕ್ಷಣ ಅನಿವಾರ್ಯ

    ಸಾಗರ: ಗ್ರಾಮೀಣ ಭಾಗದ ಯುವಕರು ನೈಪುಣ್ಯತೆ ಇದ್ದರೂ ಕೆಲಸ ಹುಡುಕಿಕೊಂಡು ನಗರ ಪ್ರದೇಶಗಳಿಗೆ ಹೋಗುತ್ತಿದ್ದ ಯುವಕರಿಗೆ ಸಾಗರದಲ್ಲಿ ತಾಂತ್ರಿಕ ಶಿಕ್ಷಣ ನೀಡುವ ಮೂಲಕ ಇಲ್ಲಿಯೇ ಕೈಗಾರಿಕೆಗಳನ್ನು ಆರಂಭಿಸಲು ಉತ್ತೇಜಿಸಲು ಸಾಗರದಲ್ಲಿ ಸಂಜಯ್ ಮೆಮೊರಿಯಲ್ ತಾಂತ್ರಿಕ ಕಾಲೇಜು ಆರಂಭಿಸಲಾಯಿತು ಎಂದು ಸಂಜಯ ವಿದ್ಯಾಕೇಂದ್ರದ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

    ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಮತ್ತು ಸಂಜಯ ವಿದ್ಯಾಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದಲ್ಲಿ ಮಾತನಾಡಿದರು.

    ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಕಾಲೇಜು ಹೆಚ್ಚು ಪ್ರಸಿದ್ಧಿ ಪಡೆದಿದೆ. ಶಿಕ್ಷಣ ಸಂಸ್ಥೆ ಸ್ಥಾಪನೆ ಹಿಂದೆ ವ್ಯಾಪಾರೀಕರಣದ ದೃಷ್ಟಿಯಿಲ್ಲ. ನಮ್ಮ ಭಾಗದ ಮಕ್ಕಳ ಒಳಿತು ಮುಖ್ಯವಾಗಿದೆ. ನಮ್ಮ ವಿದ್ಯಾಕೇಂದ್ರದಲ್ಲಿ ಶಿಕ್ಷಣ ಪಡೆದ ಅನೇಕ ಮಕ್ಕಳು ಉನ್ನತ ಸ್ಥಾನಕ್ಕೆ ತಲುಪಿದ್ದಾರೆ. ಪಾಲಿಟೆಕ್ನಿಕ್ ಕಾಲೇಜು ಅಭಿವೃದ್ಧಿಗೆ ಇನ್ನಷ್ಟು ಯೋಜನೆ ರೂಪಿಸಲಾಗಿದೆ ಎಂದರು.

    ಶಾಸಕ ಹರತಾಳು ಹಾಲಪ್ಪ ಮಾತನಾಡಿ, ತಾಂತ್ರಿಕ ಶಿಕ್ಷಣ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೊರಗಿನ ಪ್ರಪಂಚದ ಅರಿವು ಇರುವುದಿಲ್ಲ. ಎನ್​ಎಸ್​ಎಸ್ ನಂತಹ ಘಟಕಗಳಲ್ಲಿ ತೊಡಗಿಕೊಂಡಾಗ ಸಮಾಜದ ವಿವಿಧ ಮಜಲುಗಳ ಪರಿಚಯವಾಗುತ್ತದೆ. ಸಾಮಾಜಿಕ ಸ್ಥಿತಿಗತಿ ಅರಿತುಕೊಳ್ಳಲು ಸಾಧ್ಯವಿದೆ. ಯಾವ ವೃತ್ತಿ ಕೈಗೊಂಡರು ಅದರಲ್ಲಿ ಶ್ರದ್ಧೆ ಇರಬೇಕು.ಅಂಕದ ಬೆನ್ನು ಬೀಳದೆ ಸಮಾಜಕ್ಕೆ ತೆರೆದುಕೊಳ್ಳುವ ಅನುಭವದ ಶಿಕ್ಷಣಕ್ಕೆ ಮನಸ್ಸು ಮಾಡಬೇಕು ಎಂದು ಹೇಳಿದರು.

    ಭದ್ರಾವತಿ ಸರ್ಕಾರಿ ವಿಐಎಸ್​ಜೆ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಸ್.ಆರ್.ರವೀಂದ್ರ, ಡಾ.ಸರ್ಫ್ರಾಜ್ ಚಂದ್ರಗುತ್ತಿ, ಕಲ್ಮನೆ ಗ್ರಾಪಂ ಅಧ್ಯಕ್ಷ ಮಂಜಪ್ಪ, ಎನ್​ಎಸ್​ಎಸ್ ಅಧಿಕಾರಿ ಮಾರ್ತಾಂಡಪ್ಪ, ಗುರುಪ್ರಸಾದ್, ಪ್ರಾಚಾರ್ಯ ಎಸ್.ವಿ.ಸುದರ್ಶನ್, ಮಹಾಬಲೇಶ್, ಪ್ರತಾಪ್​ಸಿಂಗ್, ಎಚ್.ಪ್ರಕಾಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts