ಮುಂಬೈ: ಹಿರಿಯ ಬಾಲಿವುಡ್ ನಟ, ಮಾಜಿ ಸಂಸದ ಗೋವಿಂದ ಗುರುವಾರ (ಮಾರ್ಚ್ 28) ಕಾಂಗ್ರೆಸ್ ತೊರೆದು ಶಿವಸೇನೆ (ಏಕನಾಥ್ ಶಿಂಧೆ ಬಣ) ಸೇರ್ಪಡೆಯಾಗಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೋವಿಂದಾ ಅವರು ಮುಂಬೈ ವಾಯುವ್ಯ ಕ್ಷೇತ್ರದಿಂದ ಶಿವಸೇನೆ ಟಿಕೆಟ್ ಪಡೆದು ಸ್ಪರ್ಧಿಸುವ ಇರಾದೆ ಹೊಂದಿದ್ದಾರೆಂದು ಮೂಲಗಳು ತಿಳಿಸಿವೆ. 2004ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗೋವಿಂದ ಬಿಜೆಪಿಯ ಧೀಮಂತ ನಾಯಕ ರಾಮ್ ನಾಯಕ್ ಅವರನ್ನು ಸೋಲಿಸಿದ್ದರು.
ಇತ್ತ ಗೋವಿಂದ ಸೇರ್ಪಡೆ ಬೆನ್ನಲ್ಲೇ ಇದರ ಬೆನ್ನಲ್ಲೇ ಬಾಲಿವುಡ್ ನಟಿಯರಾದ ಕರಿಷ್ಮಾ ಕಪೂರ್, ಕರೀನಾ ಕಪೂರ್ ಅವರೂ ಶಿವಸೇನೆಯ ಏಕನಾಥ್ ಶಿಂಧೆ ಬಣವನ್ನು ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗೋವಿಂದ ಸೇರ್ಪಡೆಯಾದ ಬಳಿಕ ಶಿವಸೇನೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬಿಡುಗಡೆಯಾಗಿರುವ ಮೊದಲ ಪಟ್ಟಿಯಲ್ಲಿ ಏಳು ಮಂದಿ ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗಿದ್ದು, ರಾಮ್ಟೆಕ್ (SC) ಕ್ಷೇತ್ರದ ಟಿಕೆಟ್ಅನ್ನು ಹಾಲಿ ಸಂಸದ ಕೃಪಾಲ್ ತುಮಾನೆ ಬದಲು ಇತ್ತೀಚಿಗೆ ಕಾಂಗ್ರೆಸ್ ತೊರೆದು ಶಿವಸೇನೆ ಸೇರ್ಪಡೆಯಾಗಿದ್ದ ಮಾಜಿ ಶಾಸಕ ರಾಜು ಪರ್ವೆಗೆ ನೀಡಲಾಗಿದೆ.
ರಾಹುಲ್ ಶೆವಾಲೆ (ಮುಂಬೈ ಸೌತ್ ಸೆಂಟ್ರಲ್), ಸಂಜಯ್ ಮಾಂಡ್ಲಿಕ್ (ಕೊಲ್ಹಾಪುರ), ಸದಾಶಿವ ಲೋಖಂಡೆ (ಶಿರಡಿ (ಎಸ್ಸಿ)) ಪ್ರತಾಪ್ ರಾವ್ ಜಾಧವ್ (ಬುಲ್ಧಾನ), ಹೇಮಂತ್ ಪಾಟೀಲ್ (ಹಿಂಗೋಲಿ), ಶ್ರೀರಂಗ್ ಬರ್ನೆ ( ಮಾವಲ್) ಮತ್ತು ಧೈರ್ಯಶೀಲ ಮನೆ (ಹಟಕಣಂಗಲೆ) ಶಿವಸೇನೆ (ಏಕನಾಥ್ ಶಿಂಧೆ ಬಣ) ಟಿಕೆಟ್ ನೀಡಲಾಗಿದೆ.