More

    ಪುರ ಪ್ರವೇಶಿಸಿದ ಕಣಿವೆಮಾರಮ್ಮ ದೇವಿ

    ಚಿತ್ರದುರ್ಗ: ಕೋಟೆನಗರಿಯ ನವದುರ್ಗೆಯರಲ್ಲಿ ಪ್ರಮುಖ ಶಕ್ತಿದೇವತೆಯಾದ ಕುಂಚಿಗನಾಳ್ ಶ್ರೀ ಕಣಿವೆಮಾರಮ್ಮ ದೇವಿಯ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ‘ಸಿಡಿ’ ಮಹೋತ್ಸವ ಜರುಗಲಿದೆ.

    ಜಾತ್ರೆ ಅಂಗವಾಗಿ ಗುರುವಾರ ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮ ದೇವಿಯ ಉತ್ಸವ ಮೂರ್ತಿಯನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿ, ಬೆಳ್ಳಿ ವರ್ಣದ ಸಾರೋಟಿನಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಅದ್ದೂರಿ ಮೆರವಣಿಗೆಗೆ ಚಾಲನೆ ದೊರೆಯಿತು.

    ದೇಗುಲ ಮುಂಭಾಗದಿಂದ ಮೆರವಣಿಗೆಯೂ ಆರಂಭವಾಗಿ ಬಸವಮಂಟಪ, ದೊಡ್ಡಪೇಟೆ, ಉತ್ಸವಾಂಬ ದೇಗುಲ, ಚಿಕ್ಕಪೇಟೆ, ಆನೆಬಾಗಿಲು, ಗಾಂಧಿ, ಎಸ್‌ಬಿಐ ವೃತ್ತ ಸೇರಿ ರಾಜಬೀದಿಗಳಲ್ಲಿ ಸಂಚರಿಸಿ ಸಂಜೆ ದೇಗುಲ ತಲುಪಿತು.

    ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ನೀರೆರೆಚುವ ಮೂಲಕ ಸ್ವಾಗತಿಸಿದರು. ಉರುಮೆ, ತಮಟೆ, ಡೊಳ್ಳು ಸೇರಿ ಇತರೆ ಮಂಗಳವಾದ್ಯಗಳು ಮೆರುಗು ನೀಡಿದವು. ದೇವಿಯ ಮೂರ್ತಿಗಳನ್ನು ಹೊತ್ತು ಅನೇಕ ಜೋಗಮ್ಮಂದಿರು ಗಮನ ಸೆಳೆದರು. ಉಧೋ ಉಧೋ ಹರ್ಷೋದ್ಘಾರ ಮೊಳಗಿತು. ಹತ್ತಾರು ಪೊಲೀಸರು, ಸಮಿತಿಯವರು ಕೂಡ ಪಾಲ್ಗೊಂಡಿದ್ದರು.

    ಮುಂಜಾನೆ ದೇವಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿತು. ಬೆಳಗ್ಗೆ 10ರಿಂದ ರಾತ್ರಿ 9.30ರವರೆಗೂ ಅನೇಕ ಭಕ್ತರು ಭೇಟಿ ನೀಡಿ ಅಮ್ಮನ ದರ್ಶನ ಪಡೆದರು. ದೇಗುಲ ಮುಂಭಾಗ ನಡೆದ ಭಜನೆಯಲ್ಲಿ ದೇವಿಯ ಹಾಡುಗಳನ್ನು, ಪದಗಳನ್ನು ಹೇಳುವ ಮೂಲಕ ಭಕ್ತಿ ಸಮರ್ಪಿಸಲಾಯಿತು.

    ತವರೂರಲ್ಲಿ ಮೀಸಲು ಸಮರ್ಪಣೆ: ದೇವಿಯ ತವರಾದ ಪಾಲವ್ವನಹಳ್ಳಿಯ ಈಶ್ವರ ದೇಗುಲ, ಕ್ಯಾದಿಗೆರೆಯ ಲಕ್ಷ್ಮೀ ದೇವಿ ದೇಗುಲ ಸೇರಿ ದೊಡ್ಡಸಿದ್ದವ್ವನಹಳ್ಳಿಯ ಬೆರಳೆಣಿಕೆಯಷ್ಟು ಮನೆಗಳಲ್ಲಿ ದೇವಿಗೆ ಭಕ್ತರು ಮೀಸಲು ಸಮರ್ಪಿಸಿದ್ದಾರೆ. ದೇವಿ ಮುಂಭಾಗದ ಬಸವನಮೂರ್ತಿ ಮೂರು ಗ್ರಾಮಗಳ ಎಲ್ಲ ಭಕ್ತರ ಮನೆಗಳಿಗೂ ತೆರಳಿ ಪೂಜೆ ಸ್ವೀಕರಿಸಿ ಈಗಾಗಲೇ ದೇಗುಲಕ್ಕೆ ಮರಳಿದೆ. ಇಂದು ಕೂಡ ಅನೇಕ ಭಕ್ತರು ಮೀಸಲು ಅರ್ಪಿಸಲಿದ್ದಾರೆ.

    ವರ್ಷಕ್ಕೊಮ್ಮೆ ವಿಶೇಷ ಪೂಜೆ: ಕಣಿವೆಮಾರಮ್ಮ, ಕೊಲ್ಲಾಪುರದಮ್ಮ ದೇವಿಗೆ ಬುಧವಾರ ಗಂಗಾಪೂಜೆ ನಂತರ ವರ್ಷಕೊಮ್ಮೆ ನಡೆಯುವ ವಿಶೇಷ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿತು. ಈ ವೇಳೆ ನೂರಾರು ಭಕ್ತರು ಉತ್ಸವ ಮೂರ್ತಿಗಳನ್ನು ಕಣ್ತುಂಬಿಕೊಂಡರು. ಕೊಲ್ಲಾಪುರದಮ್ಮ ದೇವಿಯನ್ನು ಹೊತ್ತ ಅರ್ಚಕರು ಕುಣಿದು ದೇಗುಲ ಪ್ರವೇಶಿಸುವ ಆಚರಣೆ ಈ ಜಾತ್ರೆಯಲ್ಲೇ ಅತ್ಯಂತ ವಿಶೇಷ ಎನ್ನುತ್ತಾರೆ ದೇಗುಲದ ಅರ್ಚಕರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts