ಸರಗೂರು: ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ರಾಮಚಂದ್ರ ನೇತೃತ್ವದ ತಂಡ ಅಳಲಹಳ್ಳಿ ಕಾಲನಿ ಹಾಡಿಗೆ ಬುಧವಾರ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿತು.
ಕುಡಿಯುವ ನೀರು, ವಸತಿ, ಕಂದಾಯ ಗ್ರಾಮ, ವಿದ್ಯುತ್ ಸಂಪರ್ಕ, ಅಂಗನವಾಡಿ ಕೇಂದ್ರ ಹಾಗೂ ಹಾಲಿ ಇರುವ ಜನವಸತಿ ಪ್ರದೇಶದಲ್ಲಿ ವಾಸವಿರುವ ಮನೆಗಳನ್ನು ಗ್ರಾಮ ಪಂಚಾಯಿತಿ ದಾಖಲೆಗೆ ಸೇರಿಸುವಂತೆ ಹಾಡಿ ಜನರು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಶಿವಲಿಂಗಯ್ಯ ಯಶವಂತಪುರ ಮಾತನಾಡಿ, ಹಾಡಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ ಕೊಳವೆಬಾವಿ ಮತ್ತು ಟ್ಯಾಂಕ್ ನಿರ್ಮಿಸಿ ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಈ ಹಾಡಿ ನಮ್ಮ ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿದೆ. ಜನವಸತಿ ಪ್ರದೇಶವಾಗಿರುವುದರಿಂದ ಹಾಗೂ ಮೂಲಸೌಕರ್ಯಗಳನ್ನು ಒದಗಿಸುತ್ತಿರುವುದರಿಂದ ಗ್ರಾಪಂ ದಾಖಲೆಗಳಾದ ಡಿಮಾಂಡ್ನಲ್ಲಿ ನಮೂದಿಸುವಂತೆ ಪಿಡಿಒಗೆ ಸೂಚಿಸಿದರು. ತಾಪಂ ಇಒ ಗಮನ ಸೆಳೆದು ದಾಖಲಾತಿಯಲ್ಲಿ ಸೇರಿಸುವುದಾಗಿ ಪಿಡಿಒ ಶಿಲ್ಪಾ ಹೇಳಿದರು.
ಉಪಾಧ್ಯಕ್ಷ ಪ್ರಕಾಶ್ ಮಾತನಾಡಿ, ಕೆಇಬಿ, ಸಮಾಜ ಕಲ್ಯಾಣ ಇಲಾಖೆ, ಸಿಡಿಪಿಒ, ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಂಬಂಧ ಪಟ್ಟ ಇಲಾಖೆಗೆ ಪತ್ರದ ಮೂಲಕ ವರ್ಗಾಯಿಸಲಾಗುವುದೆಂದು ಭರವಸೆ ನೀಡಿದರು. ಗ್ರಾಪಂ ಸದಸ್ಯರಾದ ಶಿವಕುಮಾರ್, ಬಿ.ಎಸ್.ಗಂಗಾಧರ, ಶಿವರಾಜು, ಭಾಗ್ಯಾ, ರತ್ನಮ್ಮ, ಜ್ಯೋತಿ ರಮೇಶ್, ಪ್ರಿಯಾಂಕಾ, ಗ್ರಾಪಂ ನೌಕರರಾದ ಗುರುಪ್ರಸಾದ್, ಚನ್ನೇಗೌಡ, ಎಚ್.ಸಿ.ನಾಗರಾಜು, ಮುಖಂಡರಾದ ರಾಜೇಶ್, ನಾಗರಾಜು, ಮಹೇಶ್, ಶಿವಯ್ಯ, ಮಾಲಿಂಗಯ್ಯ, ಮಹದೇವ, ದರ್ಶನ್, ಮಣಿ, ಕಾರ್ತಿಕ್, ಮಾಧು, ನಿಂಗಾಜಮ್ಮ, ಮಾದಮ್ಮ, ಜವರಮ್ಮ ಇತರರು ಹಾಜರಿದ್ದರು.