ನವದೆಹಲಿ: ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಇದು ಲಾಕ್ಡೌನ್ ಸಮಯದ ಮಂತ್ರ. ಎಷ್ಟೇ ಹೇಳಿದರೂ ಜನರು ಇದನ್ನು ಪಾಲಿಸುತ್ತಿಲ್ಲ. ಅಗತ್ಯವೋ ಅನಗತ್ಯವೋ ಎಂಬುದನ್ನು ತಿಳಿಯದೇ ಮನೆಯಿಂದ ಹೊರಗೆ ಬರುತ್ತಲೇ ಇದ್ದಾರೆ. ಇಂಥವರನ್ನು ತಡೆಯುವುದು ಪೊಲೀಸರಿಗೆ ಸವಾಲಾಗಿದೆ. ಹೀಗಾಗಿ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಅಗತ್ಯ ಪಾಸ್ ಇಲ್ಲದೆ ಮನೆಯಿಂದ ಹೊರಬಂದು ವಾಹನಗಳಲ್ಲಿ ಸಂಚರಿಸುತ್ತಿರುವವರನ್ನು ತಡೆದು ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ. ಇದಕ್ಕಿಂತಲೂ ಒಂದು ಹೆಜ್ಜೆ ಮುಂದಾಗಿ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಇದೇ ಕ್ರಮ ಅನುಸರಿಸಲಾಗುತ್ತಿದೆ.
ಆದರೆ, ಇದು ಕಾನೂನುಬಾಹಿರ ಎಂಬ ಆಕ್ಷೇಪ ಕೇಳಿ ಬಂದಿದೆ. ಅದರಲ್ಲೂ ಉತ್ತರಪ್ರದೇಶದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಡಾ.ವಿಕ್ರಮ್ ಸಿಂಗ್ ಪೊಲೀಸರ ಈ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ಅಷ್ಟಕ್ಕೂ ನಿವೃತ್ತ ಡಿಜಿಪಿ ವಾದವೇನು ಗೊತ್ತಾ?: ಅಪರಾಧಿಕ ದಂಡ ಸಂಹಿತೆಯ (ಸಿಆರ್ಪಿಸಿ) ಎಸ್.195 ವಿಧಿಯನ್ವಯ ಹಾಗೂ ಹಲವು ನ್ಯಾಯಾಂಗ ವಿಧಿವಿಧಾನಗಳಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 188ರ ಅನ್ವಯ ಯಾವುದೇ ಎಫ್ಐಆರ್ ದಾಖಲಿಸುವಂತಿಲ್ಲ. ನ್ಯಾಯಿಕ ದಂಡಾಧಿಕಾರಿಗಳು (ಮ್ಯಾಜಿಸ್ಟ್ರೇಟ್) ಮಾತ್ರ ಸಂಬಂಧಿಸಿದ ಅಧಿಕಾರಿಗಳು ಲಿಖಿತವಾಗಿ ಸಲ್ಲಿಸಿದ ದೂರನ್ನು ಆಧರಿಸಿ ಅಪರಾಧ ಸಂಜ್ಞಯನ್ನು ನಿರ್ಧರಿಸುತ್ತಾರೆ.
ಆದರೆ, ಲಾಕ್ಡೌನ್ ನಿಯಮಗಳ ಉಲ್ಲಂಘನೆ ಆರೋಪದಲ್ಲಿ ಪೊಲೀಸರು ಐಪಿಸಿ ಸೆಕ್ಷನ್ 188ರ ಅನ್ವಯ ದಂಡಾಧಿಕಾರಿಗಳಿಗೆ ದೂರು ಸಲ್ಲಿಸುವ ಬದಲು ತಾವೇ ಎಫ್ಐಆರ್ಗಳನ್ನು ದಾಖಲಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸುವುದು ಐಪಿಸಿ ಸೆಕ್ಷನ್ 188ರ ಅನ್ವಯ ಅಪರಾಧವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಜತೆಗೆ, 188 ಸೆಕ್ಷನ್ ಸರ್ಕಾರಿ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸುವುದಕ್ಕೆ ಸಂಬಂಧಿಸಿದ್ದಾಗಿದೆ. ಇದರ ಪ್ರಕಾರ ಆರು ತಿಂಗಳ ಶಿಕ್ಷೆ, ಒಂದು ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಈ ಕಲಂ ಹೇಳುತ್ತದೆ. ಹೀಗಾಗಿ ಪೊಲೀಸರು ಈ ಸೆಕ್ಷನ್ ಅನ್ವಯ ಎಫ್ಐಆರ್ ದಾಖಲಿಸುವುದು ಕಾನೂನುಬಾಹಿರವಾಗಿದೆ. ಉತ್ತರಪ್ರದೇಶದಲ್ಲಿ ಈವರೆಗೆ 45 ಸಾವಿರಕ್ಕೂ ಅಧಿಕ ಜನರ ವಿರುದ್ಧ 15,378 ಕೇಸ್ಗಳನ್ನು ದಾಖಲಿಸಲಾಗಿದೆ. ಇವುಗಳನ್ನು ವಜಾಗೊಳಿಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ಜತೆಗೆ, ಇತರ ರಾಜ್ಯಗಳಿಗೂ ಈ ಬಗ್ಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.
ದೇ