ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಕರಾವಳಿ ಭಾಗದ ಜನರ ಜೀವನಾಡಿ ಕುಂದಾಪುರ ತಾಲೂಕಿನ ಪಂಚಗಂಗಾವಳಿ ಮಲೀನಗೊಳ್ಳುತ್ತಿದ್ದು, ಜಲಚರಗಳು ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಕುಂದಾಪುರ ತಾಲೂಕು ಹಾಗೂ ಗಂಗೊಳ್ಳಿಯಲ್ಲಿ ತಾಲೂಕಿನ ಪ್ರಮುಖ ಐದು ನದಿಗಳು ಸಂಗಮಿಸಿ ಸಮುದ್ರ ಸೇರುತ್ತಿದ್ದು, ಈ ನದಿಯಲ್ಲಿ ತ್ಯಾಜ್ಯ ತುಂಬಿ ತೇಲಾಡುತ್ತಿದೆ. ನದಿಯ ತೀರ ಪ್ರದೇಶಗಳಲ್ಲಿ ತ್ಯಾಜ್ಯ ರಾಶಿಯಾಗಿ ಬಂದು ಬೀಳುತ್ತಿದ್ದು, ನದಿಯ ಒಡಲು ತ್ಯಾಜ್ಯಗಳಿಂದ ತುಂಬಿಕೊಂಡಿದೆ. ಹೀಗಾಗಿ ನದಿಯಲ್ಲಿ ಜಲಚರಗಳು ಸಂಕಷ್ಟ ಅನುಭವಿಸುವಂತಾಗಿದ್ದು, ನದಿಯಲ್ಲಿ ಮತ್ಸ್ಯೋದ್ಯಮಕ್ಕೂ ತೊಂದರೆಯಾಗುತ್ತಿದೆ. ನದಿಯಲ್ಲಿ ತ್ಯಾಜ್ಯ ವಿಲೇವಾರಿ ನಡೆಯುತ್ತಿರುವುದು ಅಪಾಯಕ್ಕೆ ಕರೆ ನೀಡುತ್ತಿದೆ.
ನದಿಗಳು ಹರಿಯುವ ಭಾಗದಲ್ಲಿ ತ್ಯಾಜ್ಯ
ಅನೇಕ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳಾವಕಾಶ ಇಲ್ಲದಿರುವುದರಿಂದ ಹಾಗೂ ತಿಳಿವಳಿಕೆ ಕೊರತೆಯಿಂದ ಜನರು ತ್ಯಾಜ್ಯಗಳನ್ನು ನದಿಗಳಿಗೆ ಎಸೆಯುತ್ತಿದ್ದಾರೆ. ತಾಲೂಕಿನ ಐದು ಪ್ರಮುಖ ನದಿಗಳು ಬಂದು ಪಂಚಗಂಗಾವಳಿ ನದಿಯನ್ನು ಸೇರುತ್ತಿದ್ದು, ಎಲ್ಲ ನದಿಗಳು ಹರಿಯುವ ಭಾಗದಲ್ಲಿ ತ್ಯಾಜ್ಯಗಳು ಇವೆ. ಈ ಕಾರಣದಿಂದ ಪಂಚಗಂಗಾವಳಿ ನದಿಭಾಗದಲ್ಲಿ ಅತಿ ಹೆಚ್ಚು ತ್ಯಾಜ್ಯ ಸಂಗಹ್ರವಾಗುತ್ತಿದೆ.
ಜಲಚರಗಳಿಗೂ ಅಪಾಯ ಕಟ್ಟಿಟ್ಟಬುತ್ತಿ
ಮೀನುಗಾರರು ಇದರಿಂದ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಜಲಚರಗಳಿಗೂ ಅಪಾಯ ಕಟ್ಟಿಟ್ಟಬುತ್ತಿ. ಮೀನು ಹಿಡಿಯಲೆಂದು ಮೀನುಗಾರರು ಬಲೆ ಬೀಸುವ ಸಂದರ್ಭ ಬಲೆಗಳಿಗೆ ದೊಡ್ಡ ಪ್ರಮಾಣದಲ್ಲಿ ಕಸ, ತ್ಯಾಜ್ಯಗಳೇ ಸಿಕ್ಕಿಹಾಕಿಕೊಳ್ಳುತ್ತಿವೆ. ಬಲೆ ಹಾಗೂ ತ್ಯಾಜಗಳನ್ನು ಬೇರ್ಪಡಿಸಲು ಮೀನುಗಾರನು ಹರಸಾಹಸಪಡೆಬೇಕಿದೆ.
ಈ ಕುರಿತು ಸಾರ್ವಜನಿಕರು ಸರ್ಕಾರಕ್ಕೆ ಆಗ್ರಹಿಸಿದ್ದು, ಮಲಿನವಾದ ಪಂಚಗಂಗಾವಳಿ ಶುದ್ಧಿಕರಣಗೊಳಿಸಬೇಕು. ಸಂಗ್ರಹಗೊಂಡ ಕಸವನ್ನು ತೆಗೆಸಬೇಕು ಹಾಗೂ ಸೂಕ್ತ ರೀತಿಯಲ್ಲಿ ವಿಲೇವಾರಿ ವ್ಯವಸ್ಥೆ ಕಲ್ಪಿಸಬೇಕು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಅಥವಾ ಇಲಾಖೆ ಕ್ರಮಕೈಗೊಳ್ಳಬೇಕಿದ್ದು, ತ್ಯಾಜ್ಯದ ಅಸಮರ್ಪಕ ವಿಲೇವಾರಿಯಿಂದ ಆಗುವ ತೊಂದರೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕೆಂದು ಒತ್ತಾಯಿಸಿದ್ದಾರೆ.
ನದಿಯಲ್ಲಿ ತ್ಯಾಜ್ಯದ ಹಾವಳಿ ಹೆಚ್ಚಾಗುತ್ತಿದ್ದು, ನದಿ ತುಂಬ ತ್ಯಾಜ್ಯ ತುಂಬಿಕೊಳ್ಳುತ್ತಿದೆ. ಇದರಿಂದ ಮೀನುಗಾರಿಕೆ ನಡೆಸಲು ಕಷ್ಟವಾಗುತ್ತಿದ್ದು, ಬಲೆಗಳಲ್ಲಿ ತ್ಯಾಜ್ಯ ಸೇರಿಕೊಳ್ಳುತ್ತಿದೆ. ತ್ಯಾಜ್ಯದಿಂದ ಬಲೆಗಳಿಗೆ ಹಾನಿಯಾಗುತ್ತಿದ್ದು, ಇದರಿಂದ ಸರಿಯಾಗಿ ಮೀನು ಹಿಡಿಯಲಾಗದೆ ಮೀನುಗಾರರು ನಷ್ಟ ಅನುಭವಿಸುವಂತಾಗಿದೆ.
-ಗೋಪಾಲ ಖಾರ್ವಿ, ಸ್ಥಳೀಯ ಮೀನುಗಾರ