ಕಾರ್ಕಳ: ಸಿರಿ ಕ್ಷೇತ್ರಗಳಿಗೆ ಮೂಲ ಕ್ಷೇತ್ರವೆನಿಸಿದ ಇತಿಹಾಸ ಪ್ರಸಿದ್ಧ ನಾಲ್ಕು ಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಆಯನೋತ್ಸವ, ಸಿರಿ ಜಾತ್ರೆ ವಿಜೃಂಭಣೆಯಿಂದ ಸೋಮವಾರ ಸಂಪನ್ನಗೊಂಡಿತು.
ಅಬ್ಬಗ-ದಾರಗರ ಚೆನ್ನೆಮಣೆಗಳ ಸಾಲಂಕೃತ ಮೆರವಣಿಗೆ
ಶ್ರೀ ಗಂಧದ ರಜತ ಪಲ್ಲಕ್ಕಿಯಲ್ಲಿ ಶ್ರೀ ಉರಿಬ್ರಹ್ಮ ದೇವರ ಸ್ವರ್ಣ ಪಾದುಕೆ, ಅಬ್ಬಗ-ದಾರಗರ ಚೆನ್ನೆಮಣೆಗಳ ಸಾಲಂಕೃತ ಮೆರವಣಿಗೆ ಪ್ರಾಕ್ತನ ಪದ್ದತಿಯಂತೆ ಪರ್ಯಟಿಸಿ ಶ್ರೀ ಆಲಡೆಯಲ್ಲಿ ಅಣ್ಣಪ್ಪ ದರ್ಶನ, ಹಸಿಮಡಲು ಚಪ್ಪರ ಕಟ್ಟೆಪೂಜಾ ಸೇವೆ ನಡೆಯಿತು. ಶ್ರೀ ದೇವರ ಮಹೋತ್ಸವ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಸಾರ್ವಜನಿಕ ಮಹಾ ಅನ್ನಸಂತರ್ಪಣೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.
ನಂದಳಿಕೆ ಚಾವಡಿ ಅರಮನೆಯಿಂದ ಸುಂದರರಾಮ್ ಹೆಗ್ಡೆ ಅವರನ್ನು ಪರಂಪರಾಗತ ಮೆರವಣಿಗೆಯೊಂದಿಗೆ ಕರೆತರಲಾಗಿ ಕ್ಷೇತ್ರದಲ್ಲಿ ಆಯನೋತ್ಸವ, ಉತ್ಸವ ಬಲಿ, ಕೆರೆ ದೀಪೋತ್ಸವ, ಪಲ್ಲಕಿ ಸುತ್ತು, ಬಲ್ಲೇಶ್ವರ ಪೂಜೆ, ಕಟ್ಟೆಪೂಜೆ ಮಹೋತ್ಸವ ನಡೆಯಿತು. ಬಳಿಕ ಸತ್ಯದ ಸಿರಿಗಳ ಮೂಲಕ್ಷೇತ್ರ ಶ್ರೀ ಆಲಡೆ ಸನ್ನಿಧಿಯಲ್ಲಿ ಸಿರಿ-ಕುಮಾರ, ಅಬ್ಬಗ-ದಾರಗ ದರ್ಶನಾವೇಶಪೂರ್ವಕ ಸೂರ್ಯೋದಯ ಪರ್ಯಂತ ಸಪ್ತ ಸತ್ಯದ ಸಿರಿಗಳ ವೈಭವದ ಸಿರಿಜಾತ್ರೆ ವಿಧಿವತ್ತಾಗಿ ವೈಭವದಿಂದ ನಡೆಯಿತು.
ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ನಂದಳಿಕೆ ಚಾವಡಿ ಅರಮನೆ ಎನ್.ಸುಂದರರಾಮ ಹೆಗ್ಡೆ ಮಾರ್ಗದರ್ಶನದಲ್ಲಿ ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ನೇತೃತ್ವದಲ್ಲಿ ಸಿರಿಜಾತ್ರೆ ಮಹೋತ್ಸವ ಸಂಪನ್ನಗೊಂಡಿತ್ತು. ಕ್ಷೇತ್ರದ ಪ್ರಧಾನ ಅರ್ಚಕ ಹರೀಶ್ ತಂತ್ರಿ, ದೇವಳದ ವ್ಯವಸ್ಥಾಪಕ ಪಿ.ರವಿರಾಜ ಭಟ್ ಮೊದಲಾದವರಿದ್ದರು.
ಸಹಸ್ರಾರು ಮಂದಿ ಭಕ್ತರು ಬೆಳಗ್ಗಿನವರೆಗೆ ಸಿರಿಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದರು. ಉಡುಪಿ, ದ.ಕ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಮಲೆನಾಡಿನ ಲಕ್ಷಾಂತರ ಭಕ್ತರು ಸಿರಿ ಜಾತ್ರೆಯಲ್ಲಿ ಪಾಲ್ಗೊಂಡರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
ಸಿರಿ ಜಾತ್ರೆಯ ಸೊಬಗಿನಲ್ಲಿ ಡೊಳ್ಳು ವಾದನ, ಸಿಂಗಾರಿ ಮೇಳ, ಸನಾತನ ನಾಟ್ಯಾಲಯದಿಂದ ಹಾಗೂ ಬೆಳ್ಮಣ್ ನೆಕ್ಸ್ಸ್ಟೆಪ್ ಡ್ಯಾನ್ಸ್ ಅಕಾಡೆಮಿಯಿಂದ ನೃತ್ಯ ಕಾರ್ಯಕ್ರಮ, ಕೀಲು ಕುದುರೆ, ಅಂತಾರಾಷ್ಟ್ರೀಯ ಯೋಗ ಪಟು ಉದ್ಭವ್ ದೇವಾಡಿಗರಿಂದ ಯೋಗ ಪ್ರದರ್ಶನ, ವಿದ್ಯಾ ಸುವರ್ಣ ಅವರಿಂದ ಭಕ್ತಿ ರಸಮಂಜರಿ, ಕೇರಳದ ವಿವಿಧ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಿತು.