ನವದೆಹಲಿ: ಖಾಸಗಿ ಕಂಪನಿಗಳ ಹೆಸರಿನಲ್ಲಿ ಇಬ್ಬರು ವ್ಯಕ್ತಿಗಳು ಆಂಧ್ರ ಬ್ಯಾಂಕ್ನಿಂದ 12.92 ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ಇದಕ್ಕಾಗಿ ಅವರು 11.83 ಕೋಟಿ ರೂ. ಸ್ಥಿರಾಸ್ತಿಯನ್ನು ಅಡಮಾನ ಮಾಡಿದ್ದರು. ಆದರೆ, ಖಾತೆಯಲ್ಲಿ ಕೇವಲ 69 ರೂ. ಬಿಟ್ಟು ಅಷ್ಟೂ ಹಣವನ್ನು ತಮ್ಮ ಹಾಗೂ ತಮ್ಮ ಬಂಧುಬಾಂಧವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡರು. ಸಾಲವನ್ನು ತೀರುವಳಿ ಮಾಡದೆ ಕೈ ಎತ್ತಿದ್ದಾರೆ. ಇದೀಗ ಅವರು ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲದ ಕಾರಣ ಸಾಲ ವಸೂಲಿ ಮಾಡಲಾಗದೆ ಬ್ಯಾಂಕ್ ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ.
ಇದು ಸರ್ವಪ್ರೀತ್ ಚಾವ್ಲಾ ಮತ್ತು ಅಮನ್ದೀಪ್ ಸಿಂಗ್ ಗೋದಾನ್ ಎಂಬುವರ ಕರಾಮತ್ತು. ಇವರಿಬ್ಬರೂ ಒಟ್ಟಾಗಿ ಇದೇ ಬ್ಯಾಂಕ್ನಿಂದ ಸಾಲ ಪಡೆದು ವಂಚಿಸುತ್ತಿರುವುದು ಇದೇ ಮೊದಲನೇಲ್ಲ. ಕೆಲವೇ ವರ್ಷಗಳ ಹಿಂದೆ 15.45 ಕೋಟಿ ರೂ. ಸಾಲ ಎತ್ತುವಳಿ ಮಾಡಿ ಬ್ಯಾಂಕ್ ಖಾತೆಯಲ್ಲಿ 1,785 ರೂ. ಬಿಟ್ಟು ಉಳಿದ ಮೊತ್ತವನ್ನೆಲ್ಲಾ ಲಪಟಾಯಿಸಿದ್ದರು ಎಂದು ಹೇಳಲಾಗಿದೆ.
ಅಮನ್ದೀಪ್ ಮತ್ತು ಸರ್ವಪ್ರೀತ್ ಅವರು ಬ್ರಿಲಿಯಂಟ್ ಎಲೆಕ್ಟ್ರೋ-ಏರ್ ಸಂಸ್ಥೆಯನ್ನು ಆರಂಭಿಸಲು ಆಂಧ್ರ ಬ್ಯಾಂಕ್ನಿಂದ ಮೊದಲು 15.45 ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ಆ ಖಾತೆಯಲ್ಲಿ 1,785 ರೂ. ಬಿಟ್ಟು ಉಳಿದೆಲ್ಲ ಮೊತ್ತವನ್ನು ತಮ್ಮ ಹಾಗೂ ತಮ್ಮ ಬಂಧುಬಾಂಧವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು. ನಂತರದಲ್ಲಿ ಸಮಾನ ಮಾಸಿಕ ಕಂತನ್ನೂ ಪಾವತಿಸಿರಲಿಲ್ಲ. ಇತ್ತ ಸಾಲ ತೀರುವಳಿ ಮಾಡುವ ಪ್ರಯತ್ನವನ್ನೂ ಮಾಡಿರಲಿಲ್ಲ.
2018ರ ಏಪ್ರಿಲ್ನಲ್ಲಿ ಅವರ ಸಾಲದ ಖಾತೆಯನ್ನು ಅನುತ್ಪಾದಕ ಸಾಲದ ಖಾತೆಗಳ ಬಾಬ್ತಿಗೆ ಸೇರಿಸಲಾಗಿತ್ತು. ಸಾಲ ಎತ್ತುವಳಿ ಮಾಡಲು ಸ್ಥಿರಾಸ್ತಿಯನ್ನು ವಶಪಡಿಸಿಕೊಳ್ಳಲು ಬ್ರಿಲಿಯಂಟ್ ಎಲೆಕ್ಟ್ರೋ-ಏರ್ ಸಂಸ್ಥೆಗೆ ಹೋದಾಗ ಅದಕ್ಕೆ ಬೀಗ ಜಡಿಯಲಾಗಿತ್ತು.
ಇದನ್ನೂ ಓದಿ: ಪಾಂಪಿಯೋ ಇರುವೆ ಇದ್ದಂತೆ… ಆಳವಾಗಿ ಬೇರೂರಿರುವ ಮರವನ್ನು ಅಲ್ಲಾಡಿಸಲು ಯತ್ನಿಸುತ್ತಿದ್ದಾರೆ…
ಅಲ್ಲದೆ ಈ ಸಾಲವನ್ನು ಎತ್ತುವಾಗ ಅವರು ಅಡಮಾನ ಮಾಡಿದ್ದ 13.17 ಕೋಟಿ ರೂ. ಮೌಲ್ಯದ ಈ ಸ್ಥಿರಾಸ್ತಿ ಮೌಲ್ಯ ಸವಕಳಿಯಾಗಿ ಕೇವಲ 3.10 ಕೋಟಿ ರೂ.ಗೆ ಇಳಿಕೆಯಾಗಿತ್ತು. ಅಂದರೆ, ಸಾಲ ಪಡೆಯುವಾಗ ಅಡಮಾನ ಮಾಡಿದ್ದ ಸ್ಥಿರಾಸ್ತಿ ಮೌಲ್ಯವನ್ನು 10 ಪಟ್ಟು ಹೆಚ್ಚಳ ಮಾಡಿದ್ದರು ಎನ್ನಲಾಗಿದೆ.
ತಮ್ಮ ಈ ವಂಚನೆಯ ವಿರುದ್ಧ ಬ್ಯಾಂಕ್ ಯಾವುದೇ ಕ್ರಮ ಕೈಗೊಳ್ಳಲು ವಿಫಲರಾಗಿದ್ದರಿಂದ ಹಾಗೂ ಬ್ಯಾಂಕ್ನ ಅಧಿಕಾರಿಗಳು ಬದಲಾಗಿದ್ದರಿಂದ ಉತ್ತೇಜಿತರಾದ ಅಮನ್ದೀಪ್ ಮತ್ತು ಸರ್ವಪ್ರೀತ್ ಮತ್ತೊಮ್ಮೆ ಅದೇ ಬ್ಯಾಂಕ್ ಅನ್ನು ಸಂಪರ್ಕಿಸಿ ಈ ಬಾರಿ 12.92 ಕೋಟಿ ರೂ. ಸಾಲವನ್ನು ಸೊಲಾನ್ ಬಯೀದ್ ಬ್ರೈಟ್ ಪ್ಲಾಸ್ಟಿಕ್ ಹೆಸರಿನಲ್ಲಿ ಪಡೆದುಕೊಂಡಿದ್ದರು. ಇದಕ್ಕಾಗಿ ಕಂಪನಿಯು ಸೇರಿ ಒಟ್ಟ 11.83 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಅಡಮಾನ ಮಾಡಿದ್ದರು.
ಹಿಂದಿನಂತೆ ಈ ಬಾರಿ ಕೂಡ ಸಾಲದ ಮೊತ್ತವನ್ನು ತಮ್ಮ ಹಾಗೂ ತಮ್ಮ ಬಂಧುಬಾಂಧವರ ಖಾತೆಗಳಿಗೆ ವರ್ಗಾಯಿಸಿಕೊಂಡು ಸಾಲದ ಖಾತೆಯಲ್ಲಿ ಕೇವಲ 69 ರೂ. ಬಿಟ್ಟಿದ್ದರು. ಸಾಲದ್ದಕ್ಕೆ, ಸಾಲವನ್ನೂ ತೀರುವಳಿ ಮಾಡಿರಲಿಲ್ಲ.
ಇದನ್ನೂ ಓದಿ: 9 ಲಕ್ಷ ರೂ. ಬಿಲ್ ಕಟ್ಟಿದರಷ್ಟೇ ಮೃತದೇಹ ಕೊಡೋದು… ಶವಕ್ಕಾಗಿ 30 ತಾಸು ಆಸ್ಪತ್ರೆ ಬಾಗಿಲು ಕಾದ ಕುಟುಂಬಸ್ಥರು!
ಸಾಲ ವಸೂಲಿ ಮಾಡಲೆಂದು ಬ್ಯಾಂಕ್ ಅಧಿಕಾರಿಗಳು ಇವರಿಬ್ಬರೂ ಅಡಮಾನ ಮಾಡಿದ್ದ ಸ್ಥಿರಾಸ್ತಿಯನ್ನು ವಶಕ್ಕೆ ಪಡೆದುಕೊಳ್ಳಲು ಹೋದಾಗ ಅದರ ಮೌಲ್ಯ ಕೇವಲ 2.23 ಕೋಟಿ ರೂ. ಎಂಬುದು ದೃಢಪಟ್ಟಿತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಅಮನದೀಪ್ ಸಿಂಗ್ ಗೋದಾನ್ ಮತ್ತು ಸರ್ವಪ್ರೀತ್ ಚಾವ್ಲಾ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ಗೆ (ಆರ್ಬಿಐ) ಮಾಹಿತಿ ನೀಡಲಾಯಿತು. ಆರ್ಬಿಐ ಎಸ್ಎಆರ್ಎಫ್ಎಇಎಸ್ಐ ಕಾಯ್ದೆಯನ್ವಯ ಸಾಲ ವಸೂಲಾತಿ ಮಾಡುವಂತೆ ಸೂಚಿಸಿತು. ಮೌಲ್ಯ ಕಡಿತಗೊಂಡಿದ್ದರೂ ಅಡಮಾನ ಮಾಡಿರುವ ಎಲ್ಲ ಸ್ಥಿರಾಸ್ತಿಗಳನ್ನು ಬ್ಯಾಂಕ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದೀಗ ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಸಿಬಿಐಗೆ ಎರಡು ಪ್ರತ್ಯೇಕ ದೂರುಗಳನ್ನು ನೀಡಿದ್ದು, ಸಿಬಿಐ ಅಧಿಕಾರಿಗಳು ಕೂಡ ಆ ಎರಡು ವಂಚಕ ಸಂಸ್ಥೆಗಳ ಪ್ರಮೋಟರ್ಗಳ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಈ ವಂಚನೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇರುವ ಹಿನ್ನೆಲೆಯಲ್ಲಿ ಅವರನ್ನು ಕೂಡ ತನಿಖೆಗೆ ಒಳಪಡಿಸಲು ಸಿಬಿಐ ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.