ಕೊಯಿಕ್ಕೋಡ್: ಸಚಿವರ ವಾಹನಕ್ಕೆ ಸೈಡ್ ಕೊಡಲಿಲ್ಲ ಅಂತ ಚಾಲಕನೊಬ್ಬನ ಮೇಲೆ ಪೊಲೀಸರು ದಾಳಿ ಮಾಡಿರುವ ಆಘಾತಕಾರಿ ಘಟನೆ ಕೇರಳದ ಕೊಯಿಕ್ಕೋಡ್ನಲ್ಲಿ ನಡೆದಿದೆ.
ಸ್ಥಳೀಯರ ಪ್ರತಿಭಟನೆ
ಚೆಲಾರಿ ಮೂಲದ ಮುಹಮ್ಮದ್ ಸಾದಿಫ್ ಹಲ್ಲೆಗೊಳಗಾದ ಚಾಲಕ. ಈತ ಮೀನು ಸಾಗಿಸುತ್ತಿದ್ದ ವೇಳೆ ಸಚಿವ ಅಹ್ಮದ್ ದೇವರಕೋವಿಲ್ ಅವರ ವಾಹನಕ್ಕೆ ಸೈಡ್ ಕೊಡಲಿಲ್ಲ ಅಂತ ಹಲ್ಲೆ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಬೀಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಹಮ್ಮದ್ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಈ ಕ್ರಮದ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪೊಲೀಸರು ಹೇಳೋದೆ ಬೇರೆ
ಪೊಲೀಸರು ಹೇಳುವ ಪ್ರಕಾರ ಚಾಲಕ ಮುಹಮ್ಮದ್, ಸಚಿವರ ವಾಹನಕ್ಕೆ ಅಪಾಯವಾಗುವಂತೆ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಹಾಗೂ ಭದ್ರತಾ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣಕ್ಕೆ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸರ ಈ ಹೇಳಿಕೆಯನ್ನು ಸ್ಥಳೀಯರು ಒಪ್ಪಿಲ್ಲ. ಪೊಲೀಸರದ್ದೇ ತಪ್ಪು ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡು ದೌರ್ಜನ್ಯ ನಡೆಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆ ಕೊಯಿಕ್ಕೋಡ್ನ ಸೌಥ್ ಬೀಚ್ನಲ್ಲಿ ನಿನ್ನೆ ಬೆಳಗ್ಗೆ ನಡೆದಿದೆ. ಸಚಿವರ ವಾಹನದ ಮುಂದೆ ಬಹಳ ಹೊತ್ತು ಅಡ್ಡಿಪಡಿಸಿದ ಮುಹಮ್ಮದ್ಗೆ ಸಚಿವರ ಬೆಂಗಾವಲು ವಾಹನದಲ್ಲಿದ್ದ ಭದ್ರತಾ ಸಿಬ್ಬಂದಿ ಎಚ್ಚರಿಕೆ ನೀಡಿದರೂ, ಮತ್ತೆ ಸಚಿವರ ವಾಹನಕ್ಕೆ ಅಪಾಯವಾಗುವ ರೀತಿಯಲ್ಲಿ ವಾಹನ ಚಲಾಯಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯನ್ನು ಕೆಲವರು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂದು ಸಚಿವರ ಕಚೇರಿ ತಿಳಿಸಿದೆ. ಮುಹಮ್ಮದ್ ಅವರ ಮೀನಿನ ವಾಹನವು ಚೋಂಬಳದಿಂದ ಪರಪ್ಪನಂಗಡಿ ಕಡೆಗೆ ಹೋಗುತ್ತಿತ್ತು. (ಏಜೆನ್ಸೀಸ್)
ಯೂಟ್ಯೂಬರ್ ಚೊಚ್ಚಲ ನಿರ್ದೇಶನದ ಸಿನಿಮಾಗೆ ಲೇಡಿ ಸೂಪರ್ಸ್ಟಾರ್ ನಯನತಾರಾ ನಾಯಕಿ!
ಮನೆ ಮಾಲೀಕರ ಪ್ರಾಣ ಉಳಿಸಿದ ಬೆಕ್ಕುಗಳು! ಅಡುಗೆ ಮನೆಯಲ್ಲಿತ್ತು ವಿಷಕಾರಿ ನಾಗರಹಾವು…