ಪಡುಬಿದ್ರಿ: ಟೈಮಿಂಗ್ ವಿಚಾರವಾಗಿ ಬಸ್ ಚಾಲಕ ಮತ್ತು ಟೈಂ ಕೀಪರ್ ನಡುವೆ ಜಗಳ ನಡೆದು ಬಸ್ಸನ್ನು ಹೆದ್ದಾರಿಗೆ ಅಡ್ಡ ಇಟ್ಟು, ಚಾಲಕ ಮತ್ತು ನಿರ್ವಾಹಕ ತಂಗುದಾಣದಲ್ಲಿ ಕುಳಿತ ಘಟನೆ ಗುರುವಾರ ಮಧ್ಯಾಹ್ನ ಪಡುಬಿದ್ರಿಯಲ್ಲಿ ಸಂಭವಿಸಿದೆ.
ಟೈಂ ಕೀಪರ್ ಮತ್ತು ಚಾಲಕನ ನಡುವೆ ಗಲಾಟೆ
ಟೈಂ ಕೀಪರ್ ಶರತ್ ಮತ್ತು ಖಾಸಗಿ ಬಸ್ ಚಾಲಕ ಅಜೀಜ್ ಎಂಬುವರ ಮಧ್ಯೆ ಟೈಮಿಂಗ್ ವಿಚಾರವಾಗಿ ವಾಗ್ವಾದ ನಡೆದು ಪಡುಬಿದ್ರಿ ತಲುಪಿದ ಸರ್ವಿಸ್ ಬಸ್ಗೆ ಟೈಂ ಕೀಪರ್ ಅಡ್ಡ್ಡ ನಿಂತಿದ್ದಾರೆ. ಇದರಿಂದ ಸಿಟ್ಟಿಗೆದ್ದ ಚಾಲಕ, ಬಸ್ ಮಾಲೀಕರಿಗೆ ಕರೆ ಮಾಡಿದ ಬಳಿಕ ಬಸ್ಸನ್ನು ಹೆದ್ದಾರಿಯಲ್ಲಿ ಅಡ್ಡ ನಿಲ್ಲಿಸಿ ಸಮೀಪದಲ್ಲಿದ್ದ ತಂಗುದಾಣಕ್ಕೆ ಹೋಗಿ ಕುಳಿತಿದ್ದಾರೆ. ಸುಮಾರು 5 ನಿಮಿಷ ಈ ಪ್ರಹಸನ ನಡೆದಿದ್ದು, ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಬಳಿಕ ಪೊಲೀಸರು ಬಂದು ಹೆದ್ದಾರಿಯಲ್ಲಿದ್ದ ಬಸ್ ತೆರವುಗೊಳಿಸಿದರು. ಪಡುಬಿದ್ರಿ ಠಾಣೆಯಲ್ಲಿ ಶರತ್ ಮತ್ತು ಅಜೀಜ್ ಪರಸ್ಪರರ ವಿರುದ್ಧ ದೂರುಗಳನ್ನು ದಾಖಲಿಸಿದ್ದಾರೆ.