ನವದೆಹಲಿ: ದಿಗ್ಗಜ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಯನ್ನು ಒಪ್ಪಿಕೊಳ್ಳುವಂತೆ ಮನವೊಲಿಸುವಲ್ಲಿ ಅವರ ಮಾಜಿ ಸಹ-ಆಟಗಾರ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪಾತ್ರ ಮಹತ್ವದ್ದು. ದ್ರಾವಿಡ್ ಅವರನ್ನು ಒಪ್ಪಿಸಲು ಅವರ ಪುತ್ರ ನೀಡಿದ ದೂರು ಕೂಡ ಕಾರಣವಾಗಿದೆ ಎಂದು ಗಂಗೂಲಿ ಹೇಳಿದ್ದಾರೆ!
ಹೌದು, ಶಾರ್ಜಾದಲ್ಲಿ ಸಮಾರಂಭವೊಂದರಲ್ಲಿ ಗಂಗೂಲಿಗೆ ದ್ರಾವಿಡ್ರನ್ನು ಕೋಚ್ ಆಗಿ ಆಯ್ಕೆ ಮಾಡಲು ಏನು ಕಾರಣ ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಪ್ರತಿಯಾಗಿ ಗಂಗೂಲಿ, ‘ನನಗೆ ದ್ರಾವಿಡ ಪುತ್ರ ಕರೆ ಮಾಡಿ, ನನ್ನ ಅಪ್ಪ ಈಗ ಬಹಳ ಕಟ್ಟುನಿಟ್ಟಾಗಿದ್ದಾರೆ. ಅವರನ್ನು ದೂರ ಕಳುಹಿಸಬೇಕಾಗಿದೆ ಎಂದಿದ್ದ. ಆಗ ನಾನು ರಾಹುಲ್ಗೆ (ದ್ರಾವಿಡ್) ಕರೆ ಮಾಡಿ, ರಾಷ್ಟ್ರೀಯ ತಂಡಕ್ಕೆ ಕೋಚ್ ಆಗಿ ಸೇರಿಕೊಳ್ಳಲು ಇದು ಸೂಕ್ತ ಸಮಯವೆಂದೆ’ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.
ಬಳಿಕ ಗಂಭೀರವಾಗಿ ಉತ್ತರಿಸಿದ ಗಂಗೂಲಿ, ನಮ್ಮಿಬ್ಬರ ಸ್ನೇಹ ನಿವೃತ್ತಿಯ ನಂತರವೂ ಮುಂದುವರಿದಿರುವುದರಿಂದ ಅವರನ್ನು ಒಪ್ಪಿಸುವುದು ಕಷ್ಟವಾಗಲಿಲ್ಲ ಎಂದಿದ್ದಾರೆ.