ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(ಕೆಐಎ) ಆಗಮನ ದ್ವಾರದ ಸಮೀಪ ಕ್ಯಾಬ್ ಚಾಲಕ ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಆವರಿಸಿತ್ತು. ರಾಮನಗರ ಮೂಲದ ಪ್ರತಾಪ್ (34) ಆತ್ಮಹತ್ಯೆಗೆ ಯತ್ನಿಸಿದ ಚಾಲಕ. ಈ ಘಟನೆ ಮಂಗಳವಾರ ಸಂಜೆ 5 ಗಂಟೆಯಲ್ಲಿ ನಡೆದಿದ್ದು, ಏರ್ಪೋರ್ಟ್ ಸಿಬ್ಬಂದಿ ಚಾಲಕನನ್ನು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಶೇ.70 ಸುಟ್ಟ ಗಾಯಗಳು ಆಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್ಟಿಡಿಸಿ) ಕ್ಯಾಬ್ ಚಾಲಕ ಪ್ರತಾಪ್ ಬೆಳಗ್ಗೆ ಕೆಐಎಗೆ ಬಂದಿದ್ದು, ಸಂಜೆ ಕೆಐಎ ಆಗಮನ ದ್ವಾರದ ಬಳಿ ಪ್ರಯಾಣಿಕರನ್ನು ಪಿಕ್ ಅಪ್ ಮಾಡುವ ಜಾಗಕ್ಕೆ ಕಾರು ಸಮೇತ ಹೋಗಿದ್ದಾರೆ. ಏಕಾಏಕಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಹೊಗೆ ಕಾಣಿಸಿಕೊಳ್ಳುತ್ತಿದಂತೆ ಕೆಐಎ ಸಿಬ್ಬಂದಿ ಮತ್ತು ಕ್ಯಾಬ್ ಚಾಲಕರು ರಕ್ಷಣೆಗೆ ದೌಡಾಯಿಸಿದರು. ಅಗ್ನಿ ನಂದಿಸುವ ಸಲಕರಣೆಗಳನ್ನು ತೆಗೆದುಕೊಂಡು ಬೆಂಕಿ ನಂದಿಸಿ ತಕ್ಷಣ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸುಧಾರಿಸಿದ ಮೇಲೆ ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ತಿಳಿಯಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏರ್ಪೋರ್ಟ್ ದ್ವಾರದಲ್ಲಿ ಕಾರೊಳಗೆ ಕುಳಿತು ಬೆಂಕಿ ಹಚ್ಚಿಕೊಂಡ ಚಾಲಕ!
ರಾಮನಗರ ಮೂಲದ ಕಾರು ಚಾಲಕನೊಬ್ಬ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದ್ವಾರದ ಬಳಿ ಕಾರು ನಿಲ್ಲಿಸಿಕೊಂಡು, ಕಾರೊಳಗೇ ಬೆಂಕಿ ಹಚ್ಚಿಕೊಂಡಿರುವ ದೃಶ್ಯವಿದು.
ವಿವರಗಳಿಗೆ https://t.co/JCps2efeGV ನೋಡಿ pic.twitter.com/8unm2BGn7J— Vijayavani (@VVani4U) March 30, 2021
ಆ್ಯಪ್ ಆಧರಿತ ಕ್ಯಾಬ್ಗಳ ಹಾವಳಿ
ಆ್ಯಪ್ ಆಧರಿತ ಕ್ಯಾಬ್ ಸಂಸ್ಥೆಗಳ ಹಾವಳಿ ಹೆಚ್ಚಾಗಿದೆ. ಕೆಎಸ್ಟಿಡಿಸಿ ಕ್ಯಾಬ್ಗಳಿಗೆ ದಿನಕ್ಕೆ ಒಂದು ಅಥವಾ ಎರಡು ಬಾಡಿಗೆ ಸಿಕ್ಕರೇ ಹೆಚ್ಚು. ಆ್ಯಪ್ ಆಧರಿತ ಕ್ಯಾಬ್ಗಳಿಗೆ ನಮಗಿಂತ ಹೆಚ್ಚಾಗಿ ಬಾಡಿಗೆ ದೊರೆಯಲಿದೆ. ಇದರಲ್ಲಿ ಕೆಐಎ ಅಧಿಕಾರಿಗಳ ಕೈವಾಡವೂ ಇದೆ. ಆ್ಯಪ್ ಆಧರಿತ ಕ್ಯಾಬ್ಗಳಿಗೂ ಮೀಟರ್ ಅಳವಡಿಸಬೇಕು. ಇಲ್ಲವಾದರೆ, ಬಾಡಿಗೆ ಸಿಗದೆ ಸಾಲದ ಕಂತು ಪಾವತಿ ಮಾಡಲು ಸಂಪಾದನೆ ಆಗದೆ ಪ್ರತಾಪ್ ರೀತಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂಬುದು ಕೆಎಸ್ಟಿಡಿಸಿ ಕ್ಯಾಬ್ ಚಾಲಕರ ಆಕ್ರೋಶ. ಆ್ಯಪ್ ಆಧರಿತ ಕ್ಯಾಬ್ಗಳಿಗೆ ಮೀಟರ್ ಅಳವಡಿಸಬೇಕು. ನಮಗೂ ಹೆಚ್ಚಿನ ಬಾಡಿಗೆ ನೀಡಬೇಕೆಂದು ಕೆಎಸ್ಟಿಡಿಸಿ ಚಾಲಕರು ಆಗ್ರಹಿಸಿದ್ದಾರೆ. ಗಾಯಾಳು ಪ್ರತಾಪ್, ಕರೊನಾ ಲಾಕ್ಡೌನ್ ಆನಂತರ ಸಾಲದ ಕಂತು ಪಾವತಿ ಮಾಡಲು ಸಾಧ್ಯವಾಗದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
ಬೆಣ್ಣೆ ಕಾಫಿ ಕುಡಿದಿದ್ದೀರಾ?; ನೋಡಿ.. ಇಲ್ಲಿ ಇಪ್ಪತ್ತು ವರ್ಷಗಳಿಂದ ಸಿಗುತ್ತಿದೆ ‘ಬಟರ್ ಕಾಫಿ’..!
ಬಾರ್ ಡಾನ್ಸರ್ನ ಕೊಲೆ ಮಾಡಿದವನು ಯಾರು? ಪೊಲೀಸರ ತನಿಖೆಯಿಂದ ಹೊರಬಿತ್ತು ಸತ್ಯ!