ಶಿವಮೊಗ್ಗ: ಮೀನು ನುಂಗಿ ಉಸಿರಾಟದ ತೊಂದರೆಯಿಂದ ಜೀವನ್ಮರಣದ ಹೋರಾಟ ನಡೆಸುತ್ತಿದ್ದ 11 ತಿಂಗಳ ಮಗುವನ್ನು ಶಿವಮೊಗ್ಗ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ತಜ್ಞ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಅಪಾಯದಿಂದ ಪಾರು ಮಾಡಿದ್ದಾರೆ.
ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಹತ್ತಿರದ ಗಂಜೇನಹಳ್ಳಿಯ ಯೋಗೀಶ್ ಅವರ 11 ತಿಂಗಳ ಮಗು ಪ್ರತೀಕ್ಗೆ ಹೆಚ್ಚು ಜೊಲ್ಲು ಬರುತ್ತಿತ್ತು, ಈ ಹಿನ್ನಲೆ ಮೀನಿನಿಂದ ಜೊಲ್ಲು ಹೊರ ತೆಗೆಯಬಹುದೆಂಬ ಮೂಢನಂಬಿಕೆಯಿಂದ ಮಗುವಿನ ಬಾಯಿಗೆ ಜೀವಂತ ಮೀನನ್ನು ಇಟ್ಟಿದ್ದರು. ಆಟವಾಡುತ್ತಿದ್ದ ಮಗು ಪ್ರತೀಕ್ ಮೀನನ್ನು ನುಂಗಿದೆ. ಇದನ್ನು ಗಮನಿಸಿದ ಪೋಷಕರು ತಕ್ಷಣವೇ ಮೀನನ್ನು ಹೊರ ತೆಗೆಯಲು ಪ್ರಯತ್ನ ನಡೆಸಿದ್ದರಾದರೂ ಯಶಸ್ವಿ ಆಗಿರಲಿಲ್ಲ, ಅಷ್ಟೊತ್ತಿಗಾಗಲೇ ಮಗುವಿನ ಸ್ಥಿತಿಯು ಗಂಭೀರವಾಗಿತ್ತು.
ಇದನ್ನೂ ಓದಿ: ಉತ್ತರಾಖಂಡ ವಿಧಾನಸಭೆಯಲ್ಲಿ UCC ಮಂಡನೆ; ಲಿವ್-ಇನ್ ರಿಲೇಷನ್ಶಿಪ್ಗೆ ಬಂತು ವಿಶೇಷ ಕಾನೂನು
ಮಗುವನ್ನು ಸರ್ಜಿ ಆಸ್ಪತ್ರೆಗೆ ಕರೆ ತಂದಿದ್ದರು. ಕೂಡಲೇ ತಪಾಸಣೆ ನಡೆಸಿದ ತಜ್ಞ ವೈದ್ಯರು ತೀವ್ರ ನಿಗಾಘಟಕದಲ್ಲಿರಿಸಿ, ಗಂಟಲಲ್ಲಿ ಸಿಕ್ಕಿಕೊಂಡಿದ್ದ 11.3 ಸೆಂ.ಮೀ. ಉದ್ದದ ಮೀನನ್ನು ಹೊರ ತೆಗೆದು ಮಗುವಿನ ಜೀವವನ್ನು ಉಳಿಸಿದ್ದಾರೆ. ಇದೊಂದು ಅಪರೂಪದ ಪ್ರಕರಣವಾಗಿದ್ದು, ಮಗು ಪ್ರತೀಪಕ್ ಪ್ರಾಣಾಪಾಯದಿಂದ ಪಾರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ತೀವ್ರ ನಿಗಾಘಟಕ ಹಾಗೂ ಶಸ್ತ್ರ ಚಿಕಿತ್ಸಾ ಘಟಕದ ತಜ್ಞ ವೈದ್ಯರಾದ ಡಾ.ವಿನೋದ್, ಚಿಕ್ಕ ಮಕ್ಕಳಿಗೆ ಮೀನು ನುಂಗಿಸುವ ಮೂಢನಂಬಿಕೆ ಇಂದಿಗೂ ಕೆಲವು ಕಡೆ ಆಚರಣೆಯಲ್ಲಿದೆ. ದಯಮಾಡಿ ಪೋಷಕರು ಇಂತಹ ಮೂಢನಂಬಿಕೆಗೆ ಮಕ್ಕಳನ್ನು ಮಾರುಹೋಗಬಾರದು. ಅಲ್ಲದೇ ಪೋಷಕರು ಚಿಕ್ಕಮಕ್ಕಳ ಕೈಗೆ ಯಾವುದೇ ಘನ ವಸ್ತುಗಳನ್ನು ಸಿಗದಂತೆ ಇಡಬೇಕು ಎಂದು ಸಲಹೆ ನೀಡಿದ್ದಾರೆ.