ಪುಣೆ : ಕರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರು ವಹಿಸುವ ಪಾತ್ರ ಅದ್ವಿತೀಯ. ರೋಗಿಗಳ ಸೇವೆ ಮಾಡುತ್ತಾ ಈ ಸಾಂಕ್ರಾಮಿಕಕ್ಕೆ ತುತ್ತಾಗಿ ಸಾವಪ್ಪಿದ ವೈದ್ಯರು ಹಲವರಾದರೆ ತಮ್ಮ ಕುಟುಂಬದ ಸದಸ್ಯರನ್ನು ಕರೊನಾದಿಂದಾಗಿ ಕಳೆದುಕೊಂಡವರೂ ಹಲವರಿದ್ದಾರೆ. ಆದರೂ ರೋಗಿಗಳ ಸೇವೆ ಮಾತ್ರ ಮುಂದುವರಿಸುತ್ತಿದ್ದಾರೆ.
ಇಂಥದ್ದೇ ಒಂದು ಉದಾಹರಣೆ, ಮಹಾರಾಷ್ಟ್ರದ ಪುಣೆ ನಗರದಲ್ಲಿರುವ ಸಂಜೀವನ್ ಆಸ್ಪತ್ರೆಯ ಡಾ. ಮುಕುಂದ್ ಪೆನುರ್ಕರ್ ಅವರದ್ದು. ಅವರ ತಂದೆ ಇತ್ತೀಚೆಗೆ ಕರೊನಾಗೆ ತುತ್ತಾಗಿ ಸಾವಪ್ಪಿದರು. ಅಷ್ಟೇ ಅಲ್ಲ, ಅವರ ತಾಯಿ ಮತ್ತು ಸೋದರ ಕೂಡ ಕರೊನಾ ಸೋಂಕಿತರಾಗಿದ್ದಾರೆ. ಆದರೆ ಡಾ.ಪೆನುರ್ಕರ್ ಕರೊನಾ ರೋಗಿಗಳ ಸೇವೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆ ದಾಖಲಾತಿಗೆ ರಾಷ್ಟ್ರೀಯ ನೀತಿ ರೂಪಿಸಿ : ಕೇಂದ್ರಕ್ಕೆ ಸುಪ್ರೀಂ ಸೂಚನೆ
ಕಳೆದ ಏಪ್ರಿಲ್ 26 ರಂದು ಪೆನುರ್ಕರ್ ಅವರ ತಂದೆ ಸಾವಪ್ಪಿದರು. ಅದಾದ ಮೂರೇ ದಿನಗಳ ನಂತರ ಡಾ. ಮುಕುಂದ್ ಪೆನುರ್ಕರ್ ಕರ್ತವ್ಯದ ಕರೆ ಆಲಿಸಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಹಾಜರಾದರು. ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, “ಹೊರಗಿನ ಪರಿಸ್ಥಿತಿ ಸರಿಯಿಲ್ಲ ಎನ್ನುವುದು ನನಗೆ ಗೊತ್ತು. ನನ್ನ ತಂದೆಯನ್ನು ಉಳಿಸಲು ನಮ್ಮ ಆಸ್ಪತ್ರೆಯಲ್ಲೇ ನಾವು ಪೂರ್ಣ ಪ್ರಯತ್ನ ಪಟ್ಟೆವು. ಆದರೆ ಅವರನ್ನು ಕಳೆದುಕೊಂಡೆವು. ನನ್ನ ಸೋದರ ಮತ್ತು ತಾಯಿ ಇನ್ನೂ ಇಲ್ಲಿ ಕರೊನಾ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅವರ ಸ್ಥಿತಿ ಸುಧಾರಿಸಿದೆ” ಎಂದು ತಿಳಿಸಿದ್ದಾರೆ.
“ಕರೊನಾ ರೋಗಿಗಳಿಗೆ ದೀರ್ಘ ಸಮಯದಿಂದ ನಾನು ಚಿಕಿತ್ಸೆ ನೀಡುತ್ತಿದ್ದೇನೆ. ಪರಿಸ್ಥಿತಿಯನ್ನು ನನ್ನ ಕಣ್ಣಾರೆ ನೋಡಿದ್ದೇನೆ. ಆರೋಗ್ಯ ಸಿಬ್ಬಂದಿಗೆ ಪ್ರತಿಯೊಬ್ಬ ವ್ಯಕ್ತಿಗೂ ಸೇವೆ ನೀಡುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆದಷ್ಟು ಬೇಗ ನಾನು ಕರ್ತವ್ಯಕ್ಕೆ ಮರಳುವುದು ಅವಶ್ಯಕವಾಗಿತ್ತು” ಎಂದಿರುವ ಡಾ.ಪೆನುರ್ಕರ್, ಈ ಕಷ್ಟದ ಸಮಯದಲ್ಲಿ ಸಮಾಜದ ಸೇವೆಯಲ್ಲಿ ತೊಡಗುವುದು ಬಹಳ ಮುಖ್ಯವಾಗಿದೆ ಎಂದಿದ್ದಾರೆ. (ಏಜೆನ್ಸೀಸ್)