ಲಖನೌ : ಸಾವಿನ ಅಂಚಿನಲ್ಲಿದ್ದ ತಾಯಿಗೆ ಜೀವ ತುಂಬಲು ಯುವತಿಯೊಬ್ಬಳು ಬಾಯಿಂದ ಉಸಿರು ತುಂಬುವ ಪ್ರಯತ್ನ ಮಾಡಿದ ಮನ ಕಲಕುವ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ. ಆಸ್ಪತ್ರೆಯ ಸ್ಟ್ರೆಚರ್ ಮೇಲೆ ಮಲಗಿದ್ದ ಮಹಿಳೆಗೆ ಬಾಯಿಂದ ಉಸಿರು ತುಂಬುವ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶದ ಬಹ್ರೈಚ್ ಜಿಲ್ಲೆಯ ಮಹಾರಾಜ್ ಸುಹೇಲ್ದೇವ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಮರಣಶಯ್ಯೆಯಲ್ಲಿದ್ದ ಮಹಿಳೆಯ ಪ್ರಾಣವನ್ನು ಉಳಿಸಲು ಪ್ರಜ್ನಾಹೀನನಾದ ರೋಗಿಯ ಶ್ವಾಸಕೋಶಕ್ಕೆ ಉಸಿರು ತುಂಬಲು ಬಳಸುವ ಕೃತಕ ಉಸಿರಾಟದ ಕ್ರಿಯೆಯನ್ನು ಮಾಡಲು ಆಕೆಯ ಮಗಳು ಮುಂದಾಗಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ: ಆಸ್ಪತ್ರೆ ದಾಖಲಾತಿಗೆ ರಾಷ್ಟ್ರೀಯ ನೀತಿ ರೂಪಿಸಿ : ಕೇಂದ್ರಕ್ಕೆ ಸುಪ್ರೀಂ ಸೂಚನೆ
ಕರೊನಾ ಸೋಂಕಿತ ಮಹಿಳೆಗೆ ಆಕ್ಸಿಜನ್ ಸಿಗದಿದ್ದಾಗ ಮಗಳು ಬಾಯಿಂದ ಉಸಿರು ನೀಡುವ ಪ್ರಯತ್ನ ಮಾಡಿದಳು ಎಂದು ಅಮಿತ್ ಸಿಂಗ್ ಎನ್ನುವವರು ಈ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಮತ್ತು ಸಿಬ್ಬಂದಿಯ ಕೊರತೆಯಿಂದಾಗಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
#CoronaVirus: इन दिनों पूरा देश ऑक्सीजन की कमी से जूझ रहा है।ऑक्सीजन की कमी से मरने वालों की खबरें लगातार सामने आ रही हैं। बहराइच के एक अस्पताल में कोरोना संक्रमित महिला को जब ऑक्सीजन नहीं मिली तो लाचार बेटी ने मुंह से सांस देने का प्रयास किया। ये वीडियो काफ़ी वायरल हो रहा। pic.twitter.com/cODPxzT64o
— amit singh (@Join_AmitSingh) May 2, 2021
ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮತ್ತು ಮೆಡಿಕಲ್ ಕಾಲೇಜಿನ ಹಿರಿಯ ವೈದ್ಯರು ರೋಗಿಯ ಬಳಿಗೆ ಹೋಗಿ ಪರೀಕ್ಷಿಸಿದರು ಎನ್ನಲಾಗಿದೆ. ವಿಡಿಯೋದಲ್ಲಿ ಕಾಣಿಸಿಕೊಂಡ ಮಹಿಳಾ ರೋಗಿಯು ಉಸಿರಾಡಲು ಕಷ್ಟ ಪಡುತ್ತಿದ್ದ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಿದ್ದು, ವೈದ್ಯರು ಆಕೆಯನ್ನು ಪರೀಕ್ಷಿಸುತ್ತಿರುವಂತೆಯೇ ಅಸುನೀಗಿದರು ಎಂದು ಎಮರ್ಜೆನ್ಸಿ ಮೆಡಿಕಲ್ ಆಫೀಸರ್ ಅಹ್ತಿಸಂ ಅಲಿ ಹೇಳಿದ್ದಾರೆ.
“ಮಹಿಳೆಯನ್ನು ತುರ್ತು ಚಿಕಿತ್ಸೆ ಘಟಕಕ್ಕೆ ತಂದಾಗ ಕುಟುಂಬದವರು ಆಕೆ ಸಾಯುವ ಸ್ಥಿತಿಯಲ್ಲಿದ್ದಾರೆ ಎಂದರು. ವೈದ್ಯರು ಚಿಕಿತ್ಸೆ ಆರಂಭಿಸುವುದಕ್ಕೂ ಮುಂಚೆಯೇ ಆಕೆ ಮೃತಪಟ್ಟರು. ಮೃತ ಮಹಿಳೆಯ ಹೆಣ್ಣುಮಕ್ಕಳು ಭಾವುಕರಾಗಿ ಅವರಿಗೆ ಬಾಯಿಂದ ಉಸಿರು ನೀಡುತ್ತಿದ್ದರು. ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇರಲಿಲ್ಲ” ಎಂದು ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಎ.ಕೆ.ಸಹಾನಿ ಹೇಳಿದ್ದಾರೆ. (ಏಜೆನ್ಸೀಸ್)
ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್ಗೆ ಕರೊನಾ; ಸ್ಕ್ಯಾನ್ಗೆ ಹೋದಾಗ ಸೋಂಕು ?