ಅಹಮದಾಬಾದ್ : ಐಪಿಎಲ್ 2021 ರ ಭಾಗವಾಗಿದ್ದ ಕೊಲ್ಕತಾ ನೈಟ್ ರೈಡರ್ಸ್(ಕೆಕೆಆರ್)ನ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರಿಗೆ ಕರೊನಾ ಪಾಸಿಟೀವ್ ಬಂದಿದೆ. ಕಳೆದ ನಾಲ್ಕು ದಿನಗಳಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಮೂರನೇ ಸುತ್ತಿನಲ್ಲಿ ಈ ಇಬ್ಬರು ಆಟಗಾರರಿಗೆ ಸೋಂಕು ದೃಢಪಟ್ಟಿದ್ದು, ಉಳಿದ ಎಲ್ಲಾ ಸದಸ್ಯರಿಗೆ ನೆಗೆಟೀವ್ ವರದಿ ಬಂದಿದೆ ಎಂದು ಬಿಸಿಸಿಐ ತಿಳಿಸಿದೆ.
ವರುಣ್ ಚಕ್ರವರ್ತಿ ಅವರು ತಮ್ಮ ಭುಜಕ್ಕೆ ಏಟು ಬಿದ್ದಾಗ ಸ್ಕ್ಯಾನ್ ಮಾಡಿಸುವುದಕ್ಕೋಸ್ಕರ ಐಪಿಎಲ್ ಬಯೋಬಬಲ್ನ ಹೊರಗೆ ಹೋಗಿದ್ದರು. ಆ ಸಮಯದಲ್ಲೇ ಅವರಿಗೆ ಸೋಂಕು ತಗುಲಿರಬಹುದು ಎಂದು ಕ್ರಿಕ್ಇನ್ಫೋ ಸುದ್ದಿ ಸಂಸ್ಥೆ ಹೇಳಿದೆ. ಚಕ್ರವರ್ತಿ ಅವರ ಪಾಸಿಟೀವ್ ವರದಿ ನಿನ್ನೆ ರಾತ್ರಿ ಬಂದಿದ್ದು, ಆಗಿನಿಂದ ಆಟಗಾರರನ್ನು ಐಸೋಲೇಷನ್ಗೆ ಕಳುಹಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಆಸ್ಪತ್ರೆ ದಾಖಲಾತಿಗೆ ರಾಷ್ಟ್ರೀಯ ನೀತಿ ರೂಪಿಸಿ : ಕೇಂದ್ರಕ್ಕೆ ಸುಪ್ರೀಂ ಸೂಚನೆ
ಬಿಸಿಸಿಐನ ವೈದ್ಯಕೀಯ ತಂಡವು ಈ ಎರಡು ಪಾಸಿಟೀವ್ ಪ್ರಕರಣಗಳಲ್ಲಿ, ಸ್ಯಾಂಪಲ್ ಸಂಗ್ರಹಿಸಿದ ಮುಂಚಿನ 48 ಗಂಟೆಗಳಲ್ಲಿ ಅವರ ನಿಕಟ ಮತ್ತು ನಿತ್ಯದ ಸಂಪರ್ಕಕ್ಕೆ ಬಂದವರ ಪಟ್ಟಿ ಮಾಡುತ್ತಿದ್ದು, ಅವರೆಲ್ಲರನ್ನೂ ಕರೊನಾ ಪರೀಕ್ಷೆಗೆ ಒಡ್ಡಲಾಗುವುದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಕೆಕೆಆರ್ ತಂಡಗಳ ನಡುವೆ ಇಂದು ನಡೆಯಬೇಕಿದ್ದ ಐಪಿಎಲ್ ಪಂದ್ಯವನ್ನು ಮುಂದೂಡಲಾಗಿದೆ. (ಏಜೆನ್ಸೀಸ್)