More

    ಸಾಲ ವಿತರಿಸಿ ಕೃಷಿ ವಲಯ ಉತ್ತೇಜಿಸಿ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ನಿರ್ದೇಶನ

    ಮೈಸೂರು: ಹೆಚ್ಚು ಕೃಷಿ ಸಾಲ ವಿತರಿಸುವ ಮೂಲಕ ಸೊರಗಿರುವ ಕೃಷಿ ವಲಯವನ್ನು ಮತ್ತಷ್ಟು ಉತ್ತೇಜಿಸುವ ಕೆಲಸ ಮಾಡಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ನಿರ್ದೇಶನ ನೀಡಿದರು.
    ಮೈಸೂರು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 2024-25ನೇ ಸಾಲಿನ ಸಾಲ ಯೋಜನೆ, ಜಿಲ್ಲಾ ಬ್ಯಾಂಕುಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ರೈತರ ಮೇಲೆ ಬ್ಯಾಂಕ್‌ಗಳು ಸಿಂಪಥಿ ಹೊಂದಿರಬೇಕು. ತೀವ್ರ ಬರದಿಂದ ರೈತರು ಈಗಾಗಲೇ ತತ್ತರಿಸಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಾಲ ಪಡೆದ ರೈತರಿಂದ ಬ್ಯಾಂಕುಗಳು ಒತ್ತಾಯ ಪೂರ್ವಕವಾಗಿ ಸಾಲ ವಸೂಲಿ ಮಾಡುವುದನ್ನು ಸದ್ಯಕ್ಕೆ ನಿಲ್ಲಿಸಬೇಕು ಎಂದು ಸೂಚಿಸಿದರು.
    ಕೃಷಿ ಸಾಲವನ್ನು ಹೆಚ್ಚಿನ ರೀತಿಯಲ್ಲಿ ವಿತರಿಸುವ ಮೂಲಕ ಸೊರಗಿರುವ ಕೃಷಿ ವಲಯವನ್ನು ಮತ್ತಷ್ಟು ಉತ್ತೇಜಿಸಬೇಕು. ಇದರಿಂದ ರೈತರಿಗೆ ಕೊಂಚ ಅನುಕೂಲವಾಗಲಿದೆ. ಸಾಲ ಮರು ಪಾವತಿ ಮಾಡುವ ಶಕ್ತಿಯೂ ಬರುತ್ತದೆ ಎಂದರು.
    ಐಎಫ್‌ಎಸ್‌ಸಿ ಕೋಡ್ ಸಮಸ್ಯೆ ಬಗೆಹರಿಸಿ:
    ರಾಜ್ಯ ಸರ್ಕಾರ ಎಲ್ಲ ರೈತರಿಗೂ ಬರ ಪರಿಹಾರ ಬಿಡುಗಡೆ ಮಾಡಿದೆ. ಕೆಲ ಬ್ಯಾಂಕುಗಳ ವಿಲೀನದಿಂದಾಗಿ 2 ಸಾವಿರಕ್ಕೂ ಹೆಚ್ಚು ಐಎಫ್‌ಎಸ್‌ಸಿ ಕೋಡ್‌ಗಳು ಸಮಸ್ಯೆಯಾಗಿದೆ. ಪರಿಣಾಮ ರೈತರಿಗೆ ಪರಿಹಾರ ಸಂದಾಯವಾಗಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದರು.
    ಶೀಘ್ರವೇ ಆಯಾ ಬ್ಯಾಂಕುಗಳು ತಮ್ಮ ವ್ಯಾಪ್ತಿಯ ರೈತರ ಮಾಹಿತಿ ಪಡೆದು ಹೊಸ ಅಕೌಂಟ್ ತೆರೆದು ಪರಿಹಾರ ಬಿಡುಗಡೆಗೆ ಕ್ರಮ ವಹಿಸಬೇಕು. ಸರ್ಕಾರದಿಂದ ಬರುವ ಹಣ ನೇರವಾಗಿ ರೈತರ ಕೈ ತಲುಪುವಂತೆ ಮಾಡಬೇಕು ಎಂದು ತಾಕೀತು ಮಾಡಿದರು.
    ಆದ್ಯತೆ ಮೇರೆಗೆ ಕೃಷಿ, ಶಿಕ್ಷಣ ಹಾಗೂ ಕೈಗಾರಿಕಾ ವಲಯಕ್ಕೆ ಸಾಲ ನೀಡಬೇಕು. ವೃತ್ತಿಪರ ಕೋರ್ಸ್ ಮಾಡುವವರು, ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೆ ಸಾಲ ನೀಡಬೇಕು. ಈ ಮೂರು ವಲಯಕ್ಕೆ ಸಾಲ ನೀಡುವುದರಿಂದ ಅಭಿವೃದ್ಧಿಗೆ ಕೊಡುಗೆ ನೀಡಿದಂತಾಗಲಿದೆ ಎಂದು ಸಲಹೆ ನೀಡಿದರು.
    ಗ್ರಾಮೀಣ ಭಾಗದಲ್ಲಿ ಮತ್ತಷ್ಟು ಬ್ಯಾಂಕಿಂಗ್ ಸೇವೆ ವಿಸ್ತರಿಸುವ ಅಗತ್ಯವಿದೆ. 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮದಲ್ಲಿ ಬ್ಯಾಂಕ್ ಶಾಖೆ ತೆರೆಯಬೇಕು. ಈ ಮೂಲಕ ಪ್ರತಿಯೊಬ್ಬರೂ ಬ್ಯಾಂಕ್ ಸೇವೆ ಪಡೆಯಲು ಸಹಕಾರಿಯಾಗುತ್ತದೆ ಎಂದರು.
    ನಬಾರ್ಡ್‌ನಿಂದ ಹತ್ತಾರು ಯೋಜನೆಗಳಿದ್ದು, ಅವುಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ಬ್ಯಾಂಕ್‌ಗಳು ಮಾಡಬೇಕು. ನಬಾರ್ಡ್ ಅನುದಾನ ಸಮರ್ಪಕವಾಗಿ ಸದ್ಬಳಕೆ ಮಾಡಬೇಕು. ಹಳ್ಳಿ ಸಂತೆ ನಿರ್ಮಾಣಕ್ಕೆ ವಿಶೇಷ ಅನುದಾನವಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯೇ ಜನರಿಗೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಸ್ಥಳೀಯ ಆಡಳಿತ ಪ್ರತಿ ತಾಲೂಕಿನಲ್ಲಿ ಒಂದರಂತೆ 1.5 ಲಕ್ಷ ರೂ. ಹೂಡಿಕೆ ಮಾಡಿ ಹಳ್ಳಿ ಸಂತೆ ನಿರ್ಮಾಣಕ್ಕೆ ಮುಂದಾದರೆ ನಬಾರ್ಡ್ 15 ಲಕ್ಷ ರೂ. ನೀಡಲಿದೆ. ಇದು ನಮ್ಮ ಜಿಲ್ಲೆಯಲ್ಲೂ ಅನುಷ್ಠಾನವಾಗಬೇಕು ಎಂದು ಹೇಳಿದರು.
    ಹತ್ತು ರೂ. ನಾಣ್ಯ ಚಲಾವಣೆಯಲ್ಲಿದೆ :
    ಹತ್ತು ರೂ. ನಾಣ್ಯ ಚಲಾವಣೆಯಲ್ಲಿ ಇದ್ದರೂ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತೆಗೆದುಕೊಳ್ಳುತ್ತಿಲ್ಲ. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೆಲ ಬ್ಯಾಂಕ್ ಅಧಿಕಾರಿಗಳು ಕೋರಿದರು.
    ಸಾರಿಗೆ ಅಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡಲಿದ್ದು, ಹತ್ತು ರೂ. ನಾಣ್ಯ ಬಂದರೆ ತೆಗೆದುಕೊಳ್ಳುವಂತೆ ತಿಳಿಸಲಾಗುವುದು. ಅಲ್ಲದೆ ಸಿಬ್ಬಂದಿಗೆ ಈ ಕುರಿತು ಬ್ಯಾಂಕ್‌ನಿಂದ ಅರಿವು ಕಾರ್ಯಾಗಾರ ನಡೆಸುವಂತೆ ಸಲಹೆ ನೀಡಲಾಗುವುದು ಎಂದು ಡಾ.ಕೆ.ವಿ.ರಾಜೇಂದ್ರ ಇದೇ ವೇಳೆ ತಿಳಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ವಿ.ಎನ್. ನಾಗೇಶ್ ಇತರ ಅಧಿಕಾರಿಗಳು ಇದ್ದರು.

    ‘ಭಾಷೆ ಬಾರದವರಿಗೆ ನಾನೇ ಕನ್ನಡ ಕಲಿಸುವೆ’
    ಮೈಸೂರು: ಹಲವು ಬ್ಯಾಂಕ್‌ಗಳಲ್ಲಿ ಕನ್ನಡ ಅನುಷ್ಠಾನ ಸಮರ್ಪಕವಾಗಿಲ್ಲ ಎಂಬ ದೂರುಗಳಿವೆ. ಆಯಾ ಬ್ಯಾಂಕಿನ ವ್ಯವಸ್ಥಾಪಕರು ಈ ಬಗ್ಗೆ ಗಮನ ಹರಿಸಬೇಕು. ಕನ್ನಡ ಬಾರದವರ ಪಟ್ಟಿ ನೀಡಿದರೆ ನಾನೇ ಕನ್ನಡ ಕಲಿಸುವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
    ಪ್ರಾದೇಶಿಕ ಮತ್ತು ಜನರ ಭಾವನಾತ್ಮಕ ವಿಚಾರಗಳನ್ನು ಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಿದರೆ ಕೆಲಸ ಸುಲಭವಾಗುತ್ತದೆ. ತಮ್ಮ ಬ್ಯಾಂಕ್‌ಗಳಿಗೆ ಬರುವ ಜನರೊಂದಿಗೆ ಸ್ಥಳೀಯ ಭಾಷೆಯೊಂದಿಗೆ ವ್ಯವಹರಿಸಿದರೆ ಉತ್ತಮ ಎಂದು ಹೇಳಿದರು.
    ರಾಜ್ಯದಲ್ಲಿ ಕಡ್ಡಾಯವಾಗಿ ಕನ್ನಡ ಅನುಷ್ಠಾನ ಮಾಡಬೇಕು. ಬಹಳಷ್ಟು ರೈತರು ಮತ್ತು ಜನ ಸಾಮಾನ್ಯರಿಗೆ ಇಂಗ್ಲಿಷ್, ಹಿಂದಿ ಬರುವುದಿಲ್ಲ. ಹಾಗಾಗಿ ಗ್ರಾಹಕರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂದು ಸೂಚಿಸಿದರು.
    ಕನ್ನಡ ಬಾರದ ಅಧಿಕಾರಿಗಳ ಪಟ್ಟಿ ನೀಡಿದರೆ, ಅಂತಹವರಿಗೆ ಬ್ಯಾಂಕಿನ ಶಾಖೆಯಲ್ಲೇ ಸ್ಥಳೀಯ ಕನ್ನಡ ಶಿಕ್ಷಕರಿಂದ ಸಂವಹನ ಕನ್ನಡವನ್ನು ಕಲಿಸಿಕೊಡುವ ಪ್ರಯತ್ನ ಮಾಡಲಾಗುವುದು. ಜತೆಗೆ ನಾನೇ ಕನ್ನಡ ಹೇಳಿಕೊಡುವೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts