ಬೆಂಗಳೂರು: ನಟ ದಿಗಂತ್ ಚಿತ್ರದಿಂದ ಚಿತ್ರಕ್ಕೆ ವಿಭಿನ್ನವಾದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಚಿತ್ರದಲ್ಲಿ ಅವರು ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಈಗ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎಂಬ ಹೊಸ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಅಡಿಕೆ ಬೆಳೆಗಾರರಾಗಿ ಕಾಣಿಸಿಕೊಂಡಿದ್ದು, ಒಬ್ಬ ಅಡಿಕೆ ಬೆಳೆಗಾರ ಅನುಭವಿಸುವ ಹಲವು ಕಷ್ಟ-ನಷ್ಟಗಳನ್ನು ಅವರು ಈ ಚಿತ್ರದಲ್ಲೂ ಅನುಭವಿಸಿದ್ದಾರಂತೆ.
ಇದನ್ನೂ ಓದಿ: ಹೊಂಬಾಳೆ ಬ್ಯಾನರ್ನಲ್ಲಿ ಪುನೀತ್ ನಾಲ್ಕನೇ ಸಿನಿಮಾ!
ಬಿಡುಗಡೆಗೂ ಮುನ್ನವೇ ಶೀರ್ಷಿಕೆ ಮೂಲಕವೇ ಜನಪ್ರಿಯವಾಗಿರುವ ಚಿತ್ರವೆಂದರೆ ಅದು ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’. ಸಾಗರ, ಸಿಗಂಧೂರು, ಬೆಂಗಳೂರಿನ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರಕ್ಕೆ ಬೆಂಗಳೂರಿನ ಖ್ಯಾತ ಸ್ಟುಡಿಯೋದಲ್ಲಿ ಹಿನ್ನೆಲೆ ಸಂಗೀತ ಅಳವಡಿಸಲಾಗುತ್ತಿದೆ. ಕೆಲವೆ ದಿನಗಳಲ್ಲಿ ಪ್ರಥಮಪ್ರತಿ ಸಿದ್ಧವಾಗಲಿದೆ.
ಉಪ್ಪಿ ಎಂಟರ್ ಟೈನರ್ ಲಾಂಛನದಲ್ಲಿ ಸಿಲ್ಕ್ ಮಂಜು ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಪತ್ರಕರ್ತ ವಿನಾಯಕ ಕೋಡ್ಸರ ನಿರ್ದೇಶನದ ಮೊದಲ ಚಿತ್ರವಿದು. ಹಾಸ್ಯಮಯ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿನಾಯಕ ಕೋಡ್ಸರ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ.
ರಿಯಲ್ ಲೈಫ್ನ ಗಂಡ-ಹೆಂಡತಿ ದಿಗಂತ್ ಐಂದ್ರಿತಾ ರೇ ಈ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಮಿಕ್ಕಂತೆ ‘ಕನ್ನಡತಿ’ ಖ್ಯಾತಿಯ ರಂಜನಿ ರಾಘವನ್, ಉಮಾಶ್ರೀ, ಪಿ.ಡಿ.ಸತೀಶ್ ಚಂದ್ರ, ಪ್ರಕಾಶ್ ತುಮ್ಮಿನಾಡ್ ಹಾಗೂ ನೀನಾಸಂನ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರಿಂದ ನಟ ಯಶ್ಗೆ ಬಂತಂತೆ ಈ ಪತ್ರ: ನಿಜನಾ? ಸುಳ್ಳಾ…? ನೂರೆಂಟು ಪ್ರಶ್ನೆ…!
ಪ್ರಜ್ವಲ್ ಪೈ ಅವರ ಸಂಗೀತ ನೀಡಿರುವ ಈ ಚಿತ್ರಕ್ಕೆ ನಂದಕಿಶೋರ್ ಛಾಯಾಗ್ರಹಣ ಮಾಡಿದ್ದಾರೆ. ರವೀಂದ್ರ ಜೋಶಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ವೇಣು ಹಸ್ರಾಳಿ ಬರೆದಿದ್ದಾರೆ.