ನಿರ್ದೇಶಕ ದಯಾಳ್ ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ಇತ್ತೀಚೆಗಷ್ಟೇ ಪ್ರಾರಂಭವಾದ ಎಫ್.ಯು.ಸಿ ಎಂಬ ಸಂಸ್ಥೆಯಿಂದ ಅವರ ಅರ್ಜಿ ತಿರಸ್ಕಾರಗೊಂಡಿದ್ದು. ಅದೇ ಕಾರಣಕ್ಕೆ ಅವರು ‘ಲೂಸಿಯಾ’ ಪವನ್ ಕುಮಾರ್ ಸೇರಿದಂತೆ ಹಲವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನೆಪೋಮೀಟರ್ ಮಾಡಿದ್ದು ಹಣ ಮಾಡೋ ಉದ್ದೇಶದಿಂದಲ್ಲ …
ಕಳೆದ ತಿಂಗಳು ಪವನ್ ಕುಮಾರ್, ಫಿಲ್ಮ್ಮೇಕರ್ಸ್ ಯುನೈಟೆಡ್ ಕ್ಲಬ್ (ಎಫ್.ಯು.ಸಿ) ಎಂಬ ಕ್ಲಬ್ ಪ್ರಾರಂಭಿಸಿದ್ದರು. ಸಿನಿಮಾ ನಿರ್ದೇಶಕರೆಲ್ಲಾ ಸೇರಿ ಚಿತ್ರರಂಗದ ಬಗ್ಗೆ ಚರ್ಚೆ ಮಾಡುವುದಕ್ಕೆ, ಸಿನಿಮಾಗಳ ವಿಮರ್ಶೆ ಮಾಡುವುದಕ್ಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಮ್ತಮ್ಮ ಚಿತ್ರಗಳ ಬಗ್ಗೆ ಮಾತನಾಡುವುದಕ್ಕೆ ಸೃಷ್ಟಿಸಿಕೊಂಡ ವೇದಿಕೆ ಇದಾಗಿತ್ತು.
ಈ ಕ್ಲಬ್ನಲ್ಲಿ ಪವನ್ ಅಲ್ಲದೇ, ಯೋಗರಾಜ್ ಭಟ್, ಅಭಯ್ ಸಿಂಹ, ಜಯತೀರ್ಥ, ಮಂಸೋರೆ ಸೇರಿದಂತೆ ಕನ್ನಡದ ಹಲವು ಜನಪ್ರಿಯ ನಿರ್ದೇಶಕರು ಸದಸ್ಯರಾಗಿದ್ದಾರೆ. ಈ ಕ್ಲಬ್ಗೆ ಸದಸ್ಯರಾಗುವುದಕ್ಕೆ ದಯಾಳ್ ಸಹ ಅರ್ಜಿ ಸಲ್ಲಿಸಿದ್ದರು. ಆದರೆ, ದಯಾಳ್ ಸದಸ್ಯರಾಗುವುದಕ್ಕೆ ಸಾಧ್ಯವಿಲ್ಲ ಎಂದು ಪವನ್ ಇಮೇಲ್ ಮೂಲಕ ತಿಳಿಸಿದ್ದಾರೆ. ಇದರಿಂದ ದಯಾಳ್ ಸಿಟ್ಟಾಗಿದ್ದಾರೆ.
ದಯಾಳ್ ಅವರ ಅರ್ಜಿ ತಿರಸ್ಕೃತಗೊಂಡಿರುವ ಬಗ್ಗೆ ಪವನ್ ಒಂದು ಇಮೇಲ್ ಮಾಡಿದ್ದು, ಅದರಲ್ಲಿ ದಯಾಳ್ ಅವರು ಸದಸ್ಯರಾಗಿ ಯಾಕೆ ಆಯ್ಕೆಯಾಗಲಿಲ್ಲ ಎಂದು ಸಹ ಬಹಿರಂಗಪಡಿಸಿದ್ದಾರೆ. ಅದರ ಪ್ರಕಾರ, ಎಫ್ಯುಸಿಗೆ ಯಾರ್ಯಾರು ಸದಸ್ಯರಾಗಬೇಕು ಎಂದು ಹಳೆಯ ಸದಸ್ಯರು ತೀರ್ಮಾನಿಸುತ್ತಾರಂತೆ. ಇರುವ ಸದಸ್ಯರ ಪೈಕಿ 70 ಪ್ರತಿಶಿತ ಜನರು ಇಂಥವರು ಸದಸ್ಯರಾಗಬಹುದು ಎಂದು ಮತಚಲಾಯಿಸದರೆ ಮಾತ್ರ ಸದಸ್ಯರಾಗಬಹುದು. ಗುಂಪಿನಲ್ಲಿರುವ ಹಲವರು ದಯಾಳ್ ವಿರುದ್ಧ ಮತಚಲಾಯಿಸಿರುವುದರಿಂದ ಅವರ ಸದಸ್ಯತ್ವ ತಿರಸ್ಕೃತಗೊಂಡಿದೆ.
ಇದನ್ನೂ ಓದಿ: ಸರೋಜ್ ಖಾನ್ ಜತೆ ಕೆಲಸ ಮಾಡಿದ್ದೇ ನನ್ನ ಭಾಗ್ಯ; ಪ್ರಿಯಾಂಕಾ ಉಪೇಂದ್ರ
ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘ಈ ಕುರಿತು ಜೂನ್ 16ರಂದೇ ನನಗೆ ಇಮೇಲ್ ಬಂದಿತ್ತು. ಈ ಬಗ್ಗೆ ಮಾತನಾಡುವುದ ಬೇಡ ಎಂದು ಸುಮ್ಮನೆ ಇದ್ದೆ. ಆದರೆ, ಈ ಕ್ಲಬ್ನ ಗುಂಪುಗಾರಿಕೆ ನೋಡಿ ಬೇಸರವಾಗಿದೆ. ನಾನೊಬ್ಬ ನಿರ್ದೇಶಕ. ಸತತವಾಗಿ ಚಿತ್ರಗಳನ್ನು ಮಾಡುತ್ತಿದ್ದೇನೆ. ನಾನು ನಿರ್ದೇಶಕ ಅಲ್ಲ ಎಂದು ಹೇಳಲು ಅವರು ಯಾರು. ನಾನು ನನ್ನ ಕೆಲಸವನ್ನು ಅವರಿಗೆ ಪ್ರೂವ್ ಮಾಡಬೇಕಿಲ್ಲ’ ಎನ್ನುತ್ತಾರೆ ದಯಾಳ್.