ಬೆಂಗಳೂರು: ರಾಜಧಾನಿಯಲ್ಲಿ ಶನಿವಾರವೂ (ಮೇ 6) ಮುಂಗಾರುಪೂರ್ವ ಮಳೆಯ ಅಬ್ಬರ ಮುಂದುವರಿದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರೋಡ್ ಶೋ ಮುಗಿದ ಬಳಿಕ ನಗರದ ಹಲವೆಡೆ ಧಾರಾಕಾರವಾಗಿ ಸುರಿಯಿತು. ತಡ ರಾತ್ರಿವರೆಗೂ ಜಿಟಿ ಜಿಟಿ ಮಳೆ ಮುಂದುವರಿಯುವ ಸಾಧ್ಯತೆಯಿದೆ.
ಮೂರು ದಿನದ ಹಿಂದೆ ಸುರಿದ ಮಳೆಗೆ ಸಿಲಿಕಾನ್ ಸಿಟಿ ನಲುಗಿತ್ತು. ಶುಕ್ರವಾರ ಬಿಡುವು ನೀಡಿದ್ದ ಮಳೆ ಇಂದು ಮತ್ತೆ ಸುರಿದಿದೆ. ದಕ್ಷಿಣ ವಲಯ 13 ಮಿಮೀ, ಪಶ್ಚಿಮ ವಲಯ 12 ಮಿಮೀ, ಪೂರ್ವ ವಲಯ 11 ಮಿಮೀ ಹಾಗೂ ದಾಸರಹಳ್ಳಿ ವಲಯ ವ್ಯಾಪ್ತಿಯ ಪ್ರದೇಶಗಳಲ್ಲಿ 10 ಮಿಮೀ ಮಳೆಯಾಗಿದೆ. ಗೊಟ್ಟಿಗೆರೆ, ವರ್ತೂರು, ವಿದ್ಯಾರಣ್ಯ, ಯಲಚನಹಳ್ಳಿ, ಜಗರಹನಹಳ್ಳಿ, ಚಾಮರಾಜಪೇಟೆ, ಜಾಲಹಳ್ಳಿ, ಕೃಷ್ಣರಾಜೇಂದ್ರ ಮಾರುಕಟ್ಟೆ, ಕೆಂಪೇಗೌಡ ಬಸ್ ನಿಲ್ದಾಣ, ಬಸವನಗುಡಿ, ವಿಶ್ವೇಶ್ವರಯ್ಯಪುರ, ವಿಧಾನಸೌಧ, ಮಹಾತ್ಮ ಗಾಂಧಿ ರಸ್ತೆ, ಕತ್ತರಿಗುಪ್ಪೆ ಹಾಗೂ ಜೆ.ಪಿ.ನಗರ ಸೇರಿ ಹಲವು ಬಡಾವಣೆಗಳಲ್ಲಿ ಮಳೆ ಬಿರುಸಾಗಿತ್ತು.
ಮ್ಯಾನ್ಹೋಲ್ಗಳು ಉಕ್ಕಿಹರಿದ ಪರಿಣಾಮ ರಸ್ತೆಯಲ್ಲೇ ಕೊಳಚೆ ನೀರು ಹರಿಯುತ್ತಿತ್ತು. ಕೆಲವರು ಮಳೆಯಲ್ಲೇ ನೆನೆದುಕೊಂಡು ತೆರಳುತ್ತಿದ್ದರು. ಮಳೆ ರಕ್ಷಣೆಗಾಗಿ ಕೆಲವರು ಬಸ್ ನಿಲ್ದಾಣ ಹಾಗೂ ಫ್ಲೈ ಓವರ್ ಕೆಳಗಡೆ ನಿಂತಿದ್ದರೆ, ಇನ್ನೂ ಕೆಲವರು ಛತ್ರಿಯ ಆಶ್ರಯ ಪಡೆದಿದ್ದರು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಂತಾರ ಸೃಷ್ಟಿಸಿದೆ.
ಶಿವಾನಂದ ವೃತ್ತ ಸೇರಿ ಕೆಲವೆಡೆ ಅಂಡರ್ಪಾಸ್ ಹಾಗೂ ಜಂಕ್ಷನ್ಗಳಲ್ಲಿ ನೀರು ನಿಂತಿದ್ದರಿಂದ ರಸ್ತೆಯೇ ಕಾಣದಂತಾಗಿತ್ತು. ಇದರಿಂದ ವಾಹನ ದಟ್ಟಣೆ ಉಂಟಾಗಿತ್ತು.
ಇದನ್ನೂ ಓದಿ: ಸಿದ್ದು ಸೋಲಿಸಲು ಡಿಕೆಶಿ ಹೋಮ; ಕಾಂಗ್ರೆಸ್-ಬಿಜೆಪಿ ಗೆಲ್ಲದಿರಲಿ ಅಂತ ದೊಡ್ಡಗೌಡರ ಪೂಜೆ: ಸಿ.ಟಿ. ರವಿ ವ್ಯಂಗ್ಯ
ರಾಜಧಾನಿ ಕೂಲ್: ವಾರದಿಂದ ಸುರಿಯುತ್ತಿರುವ ಮಳೆಯಿಂದ ಬೇಸಿಗೆಕಾಲದಲ್ಲೂ ನಗರ ತಂಪಾಗಿದೆ. ಬಿಸಿಲು ಬೇಗೆಯಿಂದ ಬಸವಳಿದಿದ್ದ ಜನತೆಗೂ ನಿರಾಳ ಸಿಕ್ಕಿದಂತಾಗಿದೆ.ಧೂಳು ಮತ್ತು ಡಸ್ಟ್ ಅಲರ್ಜಿ ಯಂಥ ಸಮಸ್ಯೆಗಳು ಕಡಿಮೆಯಾಗಿದೆ.ಗರಿಷ್ಠ ತಾಪಮಾನದಲ್ಲಿ ಗಣನೀಯ ಕುಸಿತವಾಗಿದ್ದು, ಇಂದು 29.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಮತದಾನಕ್ಕೆ ಮಳೆ ಭೀತಿ?
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೋಚಾ ಚಂಡಮಾರುತದ ಪರಿಣಾಮ ನಗರದಲ್ಲಿ ಮೇ 7ರಿಂದ ಮೇ 11 ವರೆಗೆ ಗುಡುಗು ಮಿಂಚು ಸಹಿತ ಧಾರಾಕಾರವಾಗಿ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಮೇ 9ಕ್ಕೆ ಬಂಗಾಳಕೊಲ್ಲಿಯಲ್ಲಿ ಸೈಕ್ಲೋನ್ ರೂಪುಗೊಳ್ಳುವ ಸಾಧ್ಯತೆ ಇದೆ. ಒಂದು ಮಳೆ ಮಳೆ ಚುರುಕು ಪಡೆದರೆ ಮೇ 10ರಂದು ನಡೆಯುವ ವಿಧಾನಸಭಾ ಚುನಾವಣಾ ಮತದಾನಕ್ಕೆ ಮಳೆ ಅಡ್ಡಿಯಾಗುವ ಆತಂಕ ಎದುರಾಗಿದೆ.
ಟ್ರೋಲ್ ಮಾಡುವವರ ವಿರುದ್ಧ ಕೆಂಡ ಕಾರಿದ ಶಿವರಾಜ್ಕುಮಾರ್