ಚನ್ನಪಟ್ಟಣ: ಕಳೆದ ಭಾನುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಹಲವೆಡೆ ಅಪಾರ ಪ್ರಮಾಣದ ಬೆಳೆನಷ್ಟ ಮತ್ತು ಕೆಲ ಮನೆಗಳಿಗೆ ಹಾನಿ ಉಂಟಾಗಿ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನರಿತು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಮಳೆಹಾನಿ ವೀಕ್ಷಿಸಿದ ಕ್ಷೇತ್ರದ ಶಾಸಕರೂ ಆದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ವೈಯಕ್ತಿಕ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ನುಡಿದಂತೆ ಗುರುವಾರ ಮೊದಲ ಹಂತದ ಪರಿಹಾರ ಹಣವನ್ನು ನಷ್ಟ ಅನುಭವಿಸಿದ ಜನರ ಮನೆಮನೆಗೆ ತಲುಪಿಸಿದ್ದಾರೆ.
ಇದನ್ನೂ ಓದಿರಿ 10 ವರ್ಷದ ನಂತರ ಮೃತ ವ್ಯಕ್ತಿ ಕುಟುಂಬಕ್ಕೆ ಏಳೂವರೆ ಕೋಟಿ ರೂ. ಪರಿಹಾರ!
ತಾಲೂಕಿನ ಗೋವಿಂದನಹಳ್ಳಿ, ಪುಟ್ಟಪ್ಪನದೊಡ್ಡಿ, ಕೂರಣಗೆರೆ, ಮುದಗೆರೆ, ಚಕ್ಕೆರೆ, ಸೀಬನಹಳ್ಳಿ ಸೇರಿ ಇತರ ಗ್ರಾಮಗಳಲ್ಲಿ ಕಟಾವು ಹಂತಕ್ಕೆ ಬಂದಿದ್ದ ಹತ್ತಾರು ಎಕರೆ ಬಾಳೆ ತೋಟ ಭಾನುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ನೆಲಕಚ್ಚಿದೆ. ಕೋಲೂರು, ಸೀಬನಹಳ್ಳಿ, ಮುದಗೆರೆ ಭಾಗದಲ್ಲಿ ಫಲ ನೀಡುತ್ತಿದ್ದ ನೂರಾರು ತೆಂಗಿನ ಮರಗಳು ಮುರಿದು ಬಿದ್ದಿವೆ. ಮಾವಿನ ಮರಗಳು ಸೇರಿ ತರಕಾರಿ ಬೆಳೆಗಳೂ ನಾಶವಾಗಿವೆ. ಸೀಬನಹಳ್ಳಿ ಗ್ರಾಮದಲ್ಲಿ ಹತ್ತಾರು ಮನೆಗಳು ಹಾನಿಯಾಗಿವೆ. ಇದೇ ಗ್ರಾಮದಲ್ಲಿ ರೇಷ್ಮೆ ಸಾಕಾಣಿಕಾ ಮೇಲ್ಛಾವಣಿ ಹಾರಿಹೋಗಿ ನೂರಾರು ಕೆಜಿ ರೇಷ್ಮೆಗೂಡು ಮಳೆ ನೀರಿನ ಪಾಲಾಗಿದೆ.
ಇದನ್ನೂ ಓದಿರಿ ರೈತರ ಬದುಕನ್ನೇ ಅಲ್ಲೋಲಕಲ್ಲೋಲ ಮಾಡಿದ ಬಿರುಗಾಳಿ; ನೆಲಕಚ್ಚಿದ ತೆಂಗು, ಬಾಳೆ…
ಮಳೆಯಿಂದಾಗಿ ತನ್ನ ಕ್ಷೇತ್ರದಲ್ಲಿ ಅಪಾರ ಪ್ರಮಾಣ ಹಾನಿ ಸಂಭವಿಸಿದ ವಿಷಯ ತಿಳಿದ ಎಚ್.ಡಿ. ಕುಮಾರಸ್ವಾಮಿ ತಾಲೂಕಿಗೆ ಭೇಟಿ ನೀಡಿ ನೊಂದವರ ಕಷ್ಟ ಆಲಿಸಿದ್ದರು. ಬೆಳೆಹಾನಿಯಾದ ರೈತರಿಗೆ ಪ್ರತಿ ಎಕರೆಗೆ 10 ಸಾವಿರ ರೂ. ವೈಯಕ್ತಿಕ ಪರಿಹಾರ ನೀಡುವುದಾಗಿ ಘೋಷಿಸಿ, ನಷ್ಟ ಅನುಭವಿಸಿದ ರೈತರ ಪಟ್ಟಿ ತಯಾರಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದರು. ಮನೆ ಹಾನಿಗೂ ಕೈಲಾದಷ್ಟು ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು.
ಅದರಂತೆ ಮೊದಲ ಹಂತವಾಗಿ ಮನೆ ಹಾನಿಯಾದವರಿಗೆ ಗುರುವಾರ ಪಕ್ಷದ ಮುಖಂಡರ ಮೂಲಕ ಎಚ್ಡಿಕೆ ಪರಿಹಾರ ವಿತರಿಸಿದ್ದಾರೆ. ಇನ್ನು ಬೆಳೆಹಾನಿಯಾದ ರೈತರ ಪಟ್ಟಿ ಮಾಡುವ ಕಾರ್ಯ ಆರಂಭವಾಗಿದ್ದು, ವಾರದೊಳಗೆ ಪರಿಹಾರ ತಲುಪಲಿದೆ ಎಂದು ಪಕ್ಷದ ಹಿರಿಯ ಮುಖಂಡ ಹಾಪ್ ಕಾಮ್ಸ್ ದೇವರಾಜು ತಿಳಿಸಿದರು. ಪಕ್ಷದ ಮುಖಂಡ ಪ್ರಕಾಶ್ ಉಪಸ್ಥಿತರಿದ್ದರು.
ಇದನ್ನೂ ಓದಿರಿ ಗ್ರಾಮಸ್ಥರ ಪ್ರತಿಭಟನೆಗೆ ಬೆಚ್ಚಿ 5 ತಾಸು ಬಸ್ನಲ್ಲೇ ಕುಳಿತರು!