ಹೂವಿನಹಡಗಲಿ: ತಾಲೂಕಿನಲ್ಲಿ ಶನಿವಾರ ಬೆಳಗಿನ ಜಾವ ಸುರಿದ ಗಾಳಿ-ಮಳೆಗೆ ಕಟಾವಿಗೆ ಬಂದ ಸುಮಾರು 60 ಎಕರೆ ಭತ್ತದ ಬೆಳೆ ನೆಲಕಚ್ಚಿದೆ.
ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದಲೂ ಸುರಿಯುತ್ತಿರುವ ಮಳೆಗೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಬೆಳೆದ ಬೆಳೆ ಕೈ ಸೇರುವ ಮೊದಲೇ ನಷ್ಟ ಅನುಭವಿಸುವಂತಾಗಿದೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ. ಬ್ಯಾಲಹುಣಸಿ, ರಾಜವಾಳ, ಬನ್ನಿಮಟ್ಟಿ ಹಾಗೂ ನದಿ ತೀರದ ಗ್ರಾಮಗಳಲ್ಲಿ ಬೆಳೆದ ಭತ್ತದ ಬೆಳೆ ಮಳೆಗೆ ಸಿಲುಕಿ ನಾಶವಾಗುತ್ತಿದೆ. ಅತಿಯಾದ ಗಾಳಿ ಬೀಸಿದ ಕಾರಣ ಮನೆಗಳ ಛಾವಣಿ ತಗಡುಗಳು ಗಾಳಿಗೆ ಹಾರಿ ಹೋಗಿವೆ. ತಗ್ಗು ಪ್ರದೇಶ ಹಾಗೂ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿದ್ದರಿಂದ ವಾಹನ ಸವಾರರು ಪರದಾಡಿದರು. ಸಂಜೆಯಾದರೂ ತಂಪು ಗಾಳಿ ಮತ್ತು ಮೋಡ ಮುಸುಕಿದ ವಾತಾವರಣವಿದ್ದ ಕಾರಣಕ್ಕೆ ಹೆಚ್ಚಿನ ಜನರು ಓಡಾಡಲಿಲ್ಲ.