ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಕೋರ್ಟ್ ಕಲಾಪಗಳು ನಡೆಯದ ಪರಿಣಾಮ ಸಂಕಷ್ಟದಲ್ಲಿರುವ ವಕೀಲರ ಕ್ಲರ್ಕ್ಗಳಿಗೆ ಪ್ರತ್ಯೇಕವಾಗಿ ಪರಿಹಾರ ನೀಡಲು ಸಾಧ್ಯವಾಗದಿರುವುದಕ್ಕೆ ಕಾರಣ ತಿಳಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಕರ್ನಾಟಕ ರಾಜ್ಯ ವಕೀಲರ ಕ್ಲರ್ಕ್ಗಳ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿತು.
ವಿಚಾರಣೆ ವೇಳೆ ಕರ್ನಾಟಕ ವಕೀಲರ ಪರಿಷತ್ ಪರ ವಕೀಲರು ವಾದ ಮಂಡಿಸಿ, ಸಂಕಷ್ಟದಲ್ಲಿರುವ ವಕೀಲರಿಗೆ ಆರ್ಥಿಕ ನೆರವು ಕಲ್ಪಿಸಲು ಸರ್ಕಾರ ಪರಿಷತ್ಗೆ 5 ಕೋಟಿ ಅನುದಾನ ನೀಡಿದೆ. ಆ ಹಣ ವಕೀಲರಿಗೆ ವಿತರಿಸಲು ಕೋವಿಡ್-19 ವಕೀಲರ ಪರಿಹಾರ ನಿಧಿ ರೂಪಿಸಲಾಗಿದೆ. ಪರಿಹಾರಕ್ಕಾಗಿ ವಕೀಲರಿಂದ 4,300 ಅರ್ಜಿಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಿ ಪರಿಹಾರ ವಿತರಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದನ್ನೂ ಓದಿ: ಸ್ಯಾಂಡಲ್ವುಡ್ ಮಾದಕ ವ್ಯಸನಿಗಳ ಹೆಸರು ಹೇಳಿದ್ದ ಇಂದ್ರಜಿತ್ ಲಂಕೇಶ್ಗೆ ಸಿಸಿಬಿ ನೋಟಿಸ್…
ಸರ್ಕಾರ ನೀಡಿದ 5 ಕೋಟಿ ಹಣದಲ್ಲಿಯೇ ವಕೀಲರ ಗುಮಾಸ್ತರಿಗೂ ಪರಿಹಾರ ಕಲ್ಪಿಸಲು ತಿಳಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪರಿಷತ್ಗೆ ಪತ್ರ ಬರೆದಿದ್ದಾರೆ. ಆದರೆ, ಆ ಹಣದಲ್ಲಿ ವಕೀಲರಿಗೆ ಹಾಗೂ ಗುಮಾಸ್ತರಿಗೆ ಎಷ್ಟು ಹಣ ಉಪಯೋಗಿಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆ ಸ್ಪಷ್ಟತೆಯನ್ನು ಸರ್ಕಾರವೇ ನೀಡಬೇಕಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಸದಸ್ಯ ಕಾರ್ಯದರ್ಶಿ ಸ್ಥಾನಕ್ಕೆ ಒಬ್ಬರನ್ನು ನೇಮಕ ಮಾಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ನ್ಯಾಯಪೀಠ ಪ್ರತಿಕ್ರಿಯಿಸಿ, ಗುಮಾಸ್ತರಿಗೆ ಪ್ರತ್ಯೇಕವಾಗಿ ಪರಿಹಾರ ಕಲ್ಪಿಸಲು ಹೈಕೋರ್ಟ್ ಹೊರಡಿಸಿರುವ ಸೂಚನೆಗಳನ್ನು ಏಕೆ ಪಾಲಿಸಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಕಾರಣ ತಿಳಿಸುವಂತೆ ಸರ್ಕಾರಕ್ಕೆ ಸೂಚಿಸಿತು. ಜತೆಗೆ, ಕೋವಿಡ್-19 ವಕೀಲರ ಪರಿಹಾರ ನಿಧಿ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವಂತೆ ವಕೀಲರ ಪರಿಷತ್ಗೆ ಸೂಚಿಸಿ ಸೆ.7ಕ್ಕೆ ವಿಚಾರಣೆ ಮುಂದೂಡಿತು.
ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಇರಲ್ಲ, ವಾರಾಂತ್ಯದ ರಜೆಯೂ ಇಲ್ಲ