ನವದೆಹಲಿ: ಗುಂಡೇಟು ಬಿದ್ದರೂ ಪ್ರಯಾಣಿಕರನ್ನು ರಕ್ಷಿಸುವ ಸಲುವಾಗಿ ಸಾವನ್ನೂ ಲೆಕ್ಕಿಸದೇ ಸುಮಾರು 30 ಕಿ.ಮೀ. ದೂರದವರೆಗೆ ಬಸ್ ಚಲಾಯಿಸುವ ಮೂಲಕ ನಾಗ್ಪುರ ಮೂಲದ ಡ್ರೈವರ್ ಸಾಟಿಯಿಲ್ಲದ ಶೌರ್ಯ ಮೆರೆದಿದ್ದಾರೆ.
ಚಾಲಕನ ಹೆಸರು ಗೋಮದೇವ್ ಕಾವ್ಡೆ. ಈತ ಮಧ್ಯಪ್ರದೇಶ ಮೂಲದವನು. ದುಷ್ಕರ್ಮಿಗಳ ಬಂದೂಕಿನಿಂದ ತನ್ನ ಅಂಗೈಗೆ ಗುಂಡೇಟು ಬಿದ್ದರೂ, ಎದೆಗುಂದದೆ ಧೈರ್ಯವಾಗಿ ಬಸ್ ಚಲಾಯಿಸುವ ಮೂಲಕ ದಾಳಿಯನ್ನು ತಪ್ಪಿಸಿ, ಬಸ್ ಅನ್ನು ಹತ್ತಿರದ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗುವ ಮೂಲಕ 35 ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ. ಈ ಘಟನೆ ಭಾನುವಾರ ರಾತ್ರಿ ನಾಗ್ಪುರ ಮತ್ತು ಅಮರಾವತಿ ನಡುವಿನ ಹೆದ್ದಾರಿಯಲ್ಲಿ ನಡೆದಿದೆ.
ಬಲ್ಡಾನಾದಿಂದ ನಾಗ್ಪುರಕ್ಕೆ 35 ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದುಷ್ಕರ್ಮಿಗಳು ಬಸ್ ನಿಲ್ಲಿಸುವಂತೆ ಒತ್ತಾಯಿಸಿದರು. ಆದರೆ ಚಾಲಕ ಮಾತ್ರ ಬಸ್ ನಿಲ್ಲಿಸಲು ಒಪ್ಪಲಿಲ್ಲ. ಇದರಿಂದ ಕೆರಳಿದ ದುಷ್ಕರ್ಮಿಗಳು ಬಸ್ಸಿಗೆ ಗುಂಡು ಹಾರಿಸಿದರು. ಒಂದು ಗುಂಡು ಗೋಮದೇವ್ ಕಾವ್ಡೆಯ ಅಂಗೈಗೆ ಹೊಕ್ಕಿತು. ನೋವಿಗೂ ಅಂಜದ ಕಾವ್ಡೆ, ತನ್ನ ಅಪ್ರತಿಮ ವೀರಾವೇಶವನ್ನು ಪ್ರದರ್ಶಿಸಿದರು. ದುಷ್ಕರ್ಮಿಗಳ ದಾಳಿಯನ್ನು ವಿಫಲಗೊಳಿಸಿ, ಎಲ್ಲ ಯಾತ್ರಿಗಳನ್ನು ರಕ್ಷಿಸಿದರು.
ಪೊಲೀಸ್ ಠಾಣೆಗೆ ಬರುವವರೆಗೂ ಕಾವ್ಡೆ ಮಾತ್ರ ಸ್ಟೀರಿಂಗ್ನಿಂದ ತನ್ನ ಕೈ ತೆಗೆಯಲಿಲ್ಲ. ಈ ಘಟನೆಯಲ್ಲಿ ಮೂವರು ಪ್ರಯಾಣಿಕರೂ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ತಿವ್ಸಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತರ ಪ್ರದೇಶ ನೋಂದಣಿ ಸಂಖ್ಯೆ ಹೊಂದಿರುವ ಬೊಲೆರೊ ಎಸ್ಯುವಿಯಲ್ಲಿ ದುಷ್ಕರ್ಮಿಗಳು ಆಗಮಿಸಿದರು ಎಂದು ಕಾವ್ಡೆ ಪೊಲೀಸರಿಗೆ ತಿಳಿಸಿದ್ದಾರೆ.
ನಾಲ್ವರು ದುಷ್ಕರ್ಮಿಗಳು ದಾಳಿ ಮಾಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ಏಜೆನ್ಸೀಸ್)
ಪವಿತ್ರಾ ಗೌಡರ 777 ಟ್ಯಾಟೂಗೂ ದರ್ಶನ್ಗೂ ಇದೆ ಲಿಂಕ್! ಡಿಕೋಡ್ ಮಾಡಿದ ಅಭಿಮಾನಿಗಳು
ಹೀರೋಯಿನ್ಸ್ ಅಲ್ಲಿಗೆ ಹೋದರೆ… ತಾಪ್ಸಿಯಿಂದ ಬಾಲಿವುಡ್ ನೈಟ್ ಪಾರ್ಟಿಗಳ ಕರಾಳ ರಹಸ್ಯ ಬಯಲು
SSLC ಮುಗಿತ್ತಿದ್ದಂತೆ ಸಿನಿಮಾಗೆ ಎಂಟ್ರಿ; ನಟಿ ಸೌಂದರ್ಯ ಚಿತ್ರರಂಗಕ್ಕೆ ಬರಲು ಈ ವ್ಯಕ್ತಿಯೇ ಕಾರಣ