ಭೋಪಾಲ್: ಬಹುಮತ ಸಾಬೀತುಪಡಿಸಲು ಆಹ್ವಾನಿಸಿರುವ ರಾಜ್ಯಪಾಲರೊಟ್ಟಿಗೆ ಸಿಎಂ ಕಮಲ್ನಾಥ್ ಇಂದು ಚರ್ಚೆ ನಡೆಸಿದ್ದು, ದೇಶದೆಲ್ಲೆಡೆ ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ವಿಶ್ವಾಸಮತಯಾಚನೆಯನ್ನು ಮುಂದೂಡುವಂತೆ ಕೋರಿದ್ದಾರೆ ಎಂದು ತಿಳಿದುಬಂದಿದೆ.
ಪ್ರಮುಖ ನಾಯಕ ಹಾಗೂ ರಾಹುಲ್ ಗಾಂಧಿ ಆಪ್ತ ಜ್ಯೋತಿರಾದಿತ್ಯ ಸಿಂಧಿಯಾ, ಸಿಎಂ ಕಮಲ್ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿರುದ್ಧ ಬಂಡಾಯವೆದ್ದು ಬುಧವಾರವಷ್ಟೇ ಬಿಜೆಪಿ ಸೇರಿದ್ದಾರೆ. ಸಿಂಧಿಯಾ ಬಣದ 22 ಶಾಸಕರು ಕೂಡ ಕಾಂಗ್ರೆಸ್ಗೆ ರಾಜೀನಾಮೆ ನೀಡಿರುವುದರಿಂದ ಕಮಲ್ನಾಥ್ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಲಾಲ್ಜಿ ಟಂಡನ್ ಕಮಲ್ ಸರ್ಕಾರವನ್ನು ಬಹುಮತ ಸಾಬೀತಿಗೆ ಆಹ್ವಾನಿಸಿದ್ದಾರೆ.
ಈ ಬಗ್ಗೆ ಚರ್ಚಿಸಲು ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್, ವಿಶ್ವಾಸಮತಯಾಚನೆಯನ್ನು ಆನಂತರ ನೋಡೊಣ, ಮೊದಲು ಕರೊನಾ ವೈರಸ್ ಬಗ್ಗೆ ಗಮನ ಹರಿಸೋಣ ಎಂದಿದ್ದಾರೆ. ಅಲ್ಲದೆ, ಭೇಟಿ ವೇಳೆ ರಾಜ್ಯಪಾಲರಿಗೆ ಪತ್ರವೊಂದನ್ನು ನೀಡಿ ಬೆಂಗಳೂರಿನಲ್ಲಿ ಹಿಡಿದಿಡ್ಡಿರುವ ಶಾಸಕರು ಬಿಡುಗಡೆಗೊಳಿಸುವಂತೆ ಕಮಲ್ನಾಥ್ ಒತ್ತಾಯಿಸಿದ್ದಾರೆ.
ಶಾಸಕರನ್ನು ಹಿಡಿದಿಟ್ಟಿರುವಾಗ ವಿಶ್ವಾಸಮತಯಾಚನೆ ಹೇಗೆ ಸಾಧ್ಯ? ಮೊದಲು ಶಾಸಕರನ್ನು ಬಿಡುಗಡೆ ಮಾಡಿ ಇಲ್ಲಿಗೆ ಕರೆತರಲಿ. ಅವರ ಇಚ್ಛೆಯಂತೆ ಅವರು ದೂರದಲ್ಲಿದ್ದರೆ, ಅವರನ್ನೇಕೆ ಮಾಧ್ಯಮ ಮುಂದೆ ಬರಲು ಬಿಡುತ್ತಿಲ್ಲ ಎಂದು ಕಮಲ್ನಾಥ್ ಪ್ರಶ್ನಿಸಿದರು. ಇದೇ ವೇಳೆ ಬಿಜೆಪಿ ಮಧ್ಯಪ್ರದೇಶ ರಾಜಕೀಯದಲ್ಲಿ ಅಕ್ರಮ ಹಾಗೂ ಅನೈತಿಕವಾಗಿ ನಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದರು. ಅಲ್ಲದೆ, ಬಿಜೆಪಿ ಕುದರೆ ವ್ಯಾಪಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಮಧ್ಯಪ್ರದೇಶದ ಒಟ್ಟು 230 ವಿಧಾನಸಭಾ ಕ್ಷೇತ್ರಗಳಲ್ಲಿ ಸದ್ಯ ಕಾಂಗ್ರೆಸ್ 120 ಶಾಸಕರನ್ನು ಹೊಂದಿದ್ದು, ಬಹುಮತ ಸಂಖ್ಯೆ 116ಕ್ಕಿಂತ 4 ಶಾಸಕರನ್ನು ಹೆಚ್ಚಿಗೆ ಇದ್ದಾರೆ. ಒಂದು ವೇಳೆ 22 ಶಾಸಕರು ರಾಜೀನಾಮೆ ಅಂಗೀಕಾರವಾದರೆ ಬಹುಮತ ಸಂಖ್ಯೆ 104ಕ್ಕೆ ಕುಸಿಯಲಿದೆ. ಹೀಗಾದಲ್ಲಿ 107 ಸ್ಥಾನ ಇರುವ ಬಿಜೆಪಿಗೆ ವರವಾಗಲಿದೆ. ಬಳಿಕ ಸರ್ಕಾರ ರಚನೆಗೆ ಬಿಜೆಪಿ ಹಕ್ಕು ಸಾಧಿಸಲಿದೆ.
ಮಾರ್ಚ್ 16ರಂದು ವಿಶ್ವಾಸಮತಯಾಚನೆಗೆ ದಿನಾಂಕ ನಿಗದಿಯಾಗಿದ್ದು, ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಅದನ್ನು ಮುಂದೂಡುವಂತೆ ಕಮಲ್ ರಾಜ್ಯಪಾಲರೊಟ್ಟಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮತ್ತಷ್ಟು ಕಾಲಾವಕಾಶ ಪಡೆಯಬಹುದೆಂಬ ಲೆಕ್ಕಾಚಾರವನ್ನು ಕಮಲ್ ಇಟ್ಟುಕೊಂಡಿದ್ದಾರೆ. (ಏಜೆನ್ಸೀಸ್)
ಕೋಮಾದಲ್ಲಿದೆ ಸರ್ಕಾರ: ಷೇರುಪೇಟೆ ಕುಸಿತಕ್ಕೆ ರಾಹುಲ್ ಗಾಂಧಿ ಪ್ರತಿಕ್ರಿಯೆ