ಅಹಮದಾಬಾದ್ : ಗುಜರಾತಿನ ವಡೋದರ ಜಿಲ್ಲೆಯಲ್ಲಿ, ಕಳೆದ ಒಂದೂವರೆ ತಿಂಗಳಿಂದ ಕಾಣೆಯಾಗಿದ್ದ ಮಹಿಳೆಯ ಕೊಲೆ ಆರೋಪದ ಮೇಲೆ ಆಕೆಯ ಪೊಲೀಸ್ ಪತಿಯನ್ನೇ ಬಂಧಿಸಲಾಗಿದೆ. ಸಂತ್ರಸ್ತಳ ಮೃತದೇಹವನ್ನು ಸುಟ್ಟುಹಾಕುವಲ್ಲಿ ಸಹಾಯ ಮಾಡಿದ್ದರೆನ್ನಲಾದ ಓರ್ವ ಕಾಂಗ್ರೆಸ್ ನಾಯಕನನ್ನು ಕೂಡ ಬಂಧಿಸಲಾಗಿದೆ.
ಜೂನ್ 4 ರ ತಡರಾತ್ರಿ, ವಡೋದರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಅಜಯ್ ದೇಸಾಯಿ, ಜಗಳದ ಹಿನ್ನೆಲೆಯಲ್ಲಿ ತಮ್ಮ ಪತ್ನಿ ಸ್ವೀಟಿ ಪಟೇಲ್ರನ್ನು ಕತ್ತು ಹಿಸುಕಿ ಸಾಯಿಸಿದರು. ಮಾರನೇ ಬೆಳಿಗ್ಗೆ ಕಾಂಗ್ರೆಸ್ ನಾಯಕ ಕಿರೀಟ್ಸಿಂಹ್ ಜಡೇಜ ಅವರ ಸಹಾಯ ಪಡೆದು, ದೇಹವನ್ನು ಸುಟ್ಟುಹಾಕಿದರು. ನಂತರ ಪತ್ನಿಯ ಸೋದರನಿಗೆ ಫೋನ್ ಮಾಡಿ, ರಾತ್ರಿ ಜಗಳ ನಡೆದ ನಂತರದಿಂದ ತಮ್ಮ ಪತ್ನಿ ಕಾಣಿಸುತ್ತಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ನಡುರಾತ್ರಿ ಪ್ರೇಯಸಿಯ ಮನೆಗೆ ಹೋಗಿ ಸಿಕ್ಕಿಬಿದ್ದ ಯುವಕ; ಮುಂದಾದದ್ದು ಭಾರಿ ದುರಂತ
ಜೂನ್ 5 ರ ಬೆಳಿಗ್ಗೆ ಮೃತದೇಹವನ್ನು ಬ್ಲಾಂಕೆಟ್ನಲ್ಲಿ ಸುತ್ತಿ ಕಾರಿನಲ್ಲಿ ಸಾಗಿಸಿದ್ದ ದೇಸಾಯಿ, ಜಡೇಜಗೆ ಸೇರಿದ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಹೊಟೆಲ್ ಹಿಂಭಾಗದಲ್ಲಿ, ಮೃತದೇಹವನ್ನು ಸುಟ್ಟುಹಾಕಿದ್ದರು ಎನ್ನಲಾಗಿದೆ. ದೇಸಾಯಿ ಮತ್ತು ಜಡೇಜ ಅವರ ವಿರುದ್ಧ ಕೊಲೆ ಮತ್ತು ಸಾಕ್ಷ್ಯನಾಶದ ಆರೋಪಗಳಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಹಮದಾಬಾದ್ ಕ್ರೈಂ ಬ್ರಾಂಚ್ ಇನ್ಸ್ಪೆಕ್ಟರ್ ಡಿ.ಬಿ.ಬರದ್ ಹೇಳಿದ್ದಾರೆ.
ಬಂಧನಕ್ಕೊಳಗಾಗಿರುವ ಕಿರೀಟ್ಸಿಂಹ್ ಜಡೇಜ, 2020 ರಲ್ಲಿ ವಡೋದರ ಜಿಲ್ಲೆಯ ಕರ್ಜನ್ ವಿಧಾನಸಭೆಯ ಬೈಎಲೆಕ್ಷನ್ನಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಸ್ಪರ್ಧಿಸಿ ಸೋಲನುಭವಿಸಿದ್ದರು ಎನ್ನಲಾಗಿದೆ. ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಮತ್ತು ರಾಜ್ಯದ ಆ್ಯಂಟಿ ಟೆರರಿಸಂ ಸ್ಕ್ವಾಡ್ನ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿದ್ದರು. (ಏಜೆನ್ಸೀಸ್)
ಕಣ್ಣೀರು ಹಾಕುತ್ತಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ ಬಿಎಸ್ವೈ