ಶಿವಮೊಗ್ಗ: ತಾನೊಬ್ಬ ವಿಜ್ಞಾನಿ ಎಂದು ಸುಳ್ಳು ಹೇಳಿಕೊಂಡು ಸಾರ್ವಜನಿಕರನ್ನು ವಂಚಿಸಿರುವ ಆರೋಪದಡಿ ಡ್ರೋನ್ ಪ್ರತಾಪ್ ವಿರುದ್ಧ ವಕೀಲರು ಸೇರಿದಂತೆ ಇಬ್ಬರು ಪ್ರತ್ಯೇಕವಾಗಿ ದೂರು ನೀಡಿದ್ದಾರೆ.
ಸಾಗರದ ಚಾಮರಾಜಪೇಟೆಯ ವಕೀಲ ಕೆ.ವಿ.ಪ್ರವೀಣ್ ಎಂಬುವರು ‘ಡ್ರೋನ್ ಪ್ರತಾಪ್’ ವಿರುದ್ಧ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಂಡ್ಯ ಎಸ್ಪಿಗೆ ಶುಕ್ರವಾರ ಅಂಚೆ ಮೂಲಕ ದೂರು ಸಲ್ಲಿಸಿದ್ದಾರೆ. ‘ಪ್ರತಾಪ್ ತಾನೊಬ್ಬ ಡ್ರೋನ್ ವಿಜ್ಞಾನಿ ಎಂದು ಹೇಳಿಕೊಂಡಿದ್ದು, ಸ್ವತಃ ವರ್ಷದ ಹಿಂದೆ ಶಿವಮೊಗ್ಗದಲ್ಲಿ ಆತನ ಭಾಷಣ ಕೇಳಿ ನಂಬಿದ್ದೆ. ಡ್ರೋನ್ ಸಂಶೋಧನೆ ಹೆಸರಿನಲ್ಲಿ ಪ್ರತಾಪ್ ಸಾರ್ವಜನಿಕರಿಗೆ ವಿಜ್ಞಾನಿ ಎಂದು ನಂಬಿಸಿ ಮೋಸ ಮಾಡಿದ್ದಾನೆ. ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಕೀಲರು ಒತ್ತಾಯಿಸಿದ್ದಾರೆ.
ಇದನ್ನೂ ಓದಿರಿ ಟ್ರೋಲ್ ಆಗುವ ಬಗ್ಗೆ ಮೊದಲೇ ಗೊತ್ತಿತ್ತಂತೆ: ಹೋಟೆಲ್ ಮಾಲೀಕ-ಪ್ರತಾಪ್ ನಡುವೆ ನಡೆದಿತ್ತು ರೋಚಕ ಮಾತುಕತೆ!
ಪ್ರತಾಪ್ ವಿರುದ್ಧ ಸಾಗರದ ವಕೀಲರು ಅಂಚೆ ಮೂಲಕ ಕಳುಹಿಸಿರುವ ದೂರಿನ ಪ್ರತಿ ತಲುಪಿದ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮಂಡ್ಯ ಎಸ್ಪಿ ತಿಳಿಸಿದ್ದಾರೆ.
ಇನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರ್ಗೆ ಡ್ರೋನ್ ಪ್ರತಾಪ್ ವಿರುದ್ಧ ಜೇಕಬ್ ಜಾರ್ಜ್ ಎಂಬುವವರು ದೂರು ನೀಡಿದ್ದಾರೆ. ‘ತಾನೊಬ್ಬ ವಿಜ್ಞಾನಿ ಎಂದು ಸುಳ್ಳು ಹೇಳಿಕೊಂಡು, ಡ್ರೋಣ್ ಪ್ರಾಜೆಕ್ಟ್ ಮಾಡುತ್ತಿರುವುದಾಗಿ ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡಿದ್ದಾನೆ ಎನ್ನಲಾಗುತ್ತಿರುವ ಮಂಡ್ಯದ ಡ್ರೋನ್ ಪ್ರತಾಪ್ ವಿರುದ್ಧ ದೂರು ದಾಖಲಿಸಿಕೊಂಡು ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಕೋರಿದ್ದಾರೆ.
‘ಮಂಡ್ಯದ ಪ್ರತಾಪ್, 87 ದೇಶ ಸುತ್ತಿರುವುದಾಗಿ ಹಾಗೂ 300 ಉಪನ್ಯಾಸ ನೀಡಿರುವುದಾಗಿ ಸುಳ್ಳು ಹೇಳಿದ್ದಾನೆ. ಇಂಥ ಸುಳ್ಳುಗಳನ್ನೇ ಮುಂದಿಟ್ಟುಕೊಂಡು ಹಲವು ಗಣ್ಯರು, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಹಣ ಪಡೆದಿರು ಮಾಹಿತಿ ಇದೆ. ಪ್ರತಾಪ್ ತೆಗೆದುಕೊಂಡಿರುವ ಹಣವನ್ನು ವಸೂಲಿ ಮಾಡಿ ನೈಜ ವಿಜ್ಞಾನಿಗಳಿಗೆ ಕೊಡಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.