ಮಂಗಳೂರು: ಮಂಗಳೂರಿನಲ್ಲಿ ನಡೆದ ಆಟೊರಿಕ್ಷಾ ಸ್ಫೋಟ ಒಮ್ಮೆಗೆ ಇಡಿ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದ ರಾಜ್ಯ ಪೊಲೀಸರಿಗೆ ಮತ್ತು ಗುಪ್ತಚರ ದಳಕ್ಕೆ ಇಂದು ಶಾರಿಕ್ ಬಾಡಿಗೆಗೆ ಪಡೆದಿದ್ದ ಮನೆಯಲ್ಲಿ ಸ್ಫೋಟಕ ವಸ್ತುಗಳು, ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಸಿಮ್ ಸೇರಿದಂತೆ ಅನೇಕ ವಸ್ತುಗಳು ದೊರೆತಿವೆ. ಇಂದು ಆತ ಐಸಿಸ್ ಮಾದರಿಯಲ್ಲಿ ಕುಕ್ಕರ್ ಬಾಂಬನ್ನು ಹಿಡಿದು ನಿಂತಿದ್ದ ಫೋಟೊ ಒಂದು ವೈರಲ್ ಕೂಡ ಆಗಿದೆ. ಈಗ ಈ ಶಂಕಿತ ಉಗ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಂದು ಆಸ್ಪತ್ರೆಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಆಗಮಿಸಿದ್ದು ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಸದ್ಯ ಶಂಕಿತ ಉಗ್ರ ಶಾರೀಕ್ ಜೊತೆಗೆ ಆಟೋ ಚಾಲಕ ಪುರುಷೋತ್ತಮ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆ ಭೇಟಿಯ ಬಳಿಕ ಕಮಿಷನರ್ ಎನ್. ಶಶಿಕುಮಾರ್ ಮಾತನಾಡಿದ್ದು ‘ಶಾರೀಕ್ ಗುಣಮುಖ ಆದ ತಕ್ಷಣ ವಶಕ್ಕೆ ಪಡೆಯುತ್ತೇವೆ. ಶಾರೀಕ್ ಹಾಗೂ ಪುರುಷೋತ್ತಮ್ ಇಬ್ಬರಿಗೂ ಚಿಕಿತ್ಸೆ ಮುಂದುವರಿದಿದ್ದು ಪುರುಷೋತ್ತಮ್ ಅವರಿಗೂ ಸುಟ್ಟ ಗಾಯಗಳಾಗಿವೆ. ಪುರುಷೋತ್ತಮ್ ಆರೋಗ್ಯ ಸ್ಥಿರವಾಗಿದ್ದು ಮಾತನಾಡುವ ಸ್ಥಿತಿಯಲ್ಲಿದ್ದಾರೆ. ಈಗ ಅವರ ಕುಟುಂಬದ ಸದಸ್ಯರು ಅವರ ಜೊತೆಯಲ್ಲಿದ್ದಾರೆ. ಶಾರೀಕ್ಗೂ ಚಿಕಿತ್ಸೆ ಮುಂದುವರಿದಿದೆ. ಆದ್ರೆ ಪ್ರಶ್ನೆ ಮಾಡುವುದಕ್ಕೆ ಸಾಧ್ಯವಾಗಿಲ್ಲ’ ಎಂದು ಹೇಳಿದರು.
ಪರಿಸ್ಥಿತಿಯ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿರುವ ಮಂಗಳೂರು ಕಮಿಷನರ್ ‘ಇಂದು ಬೆಳಗ್ಗೆ ಕುಟುಂಬ ಸದಸ್ಯರು ಶಾರೀಕ್ ಗುರುತು ಪತ್ತೆ ಮಾಡಿದ್ದಾರೆ. ಆತನ ಆರೋಗ್ಯ ಹೀಗೆಯೆ ಆಗುತ್ತೆ ಎಂಬ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿಲ್ಲ. ಆತನಲ್ಲಿ ಸಾಕಷ್ಟು ಮಾಹಿತಿ ಇದೆ. ಆತನಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಶ್ನೆಗೆ ಉತ್ತರ ನೀಡಲು ಯಾವಾಗ ಅರ್ಹನಾಗುತ್ತಾನೆ ಎಂಬುದನ್ನು ಗಮನಿಸಿ ವಶಕ್ಕೆ ಪಡೆಯುತ್ತೇವೆ. ನಮ್ಮ ಅಧಿಕಾರಿ ಒಬ್ಬರನ್ನು ಆಸ್ಪತ್ರೆಯಲ್ಲಿ ನೇಮಕ ಮಾಡಲಾಗಿದೆ. ಅವರು ಶಾರೀಕ್ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಾರೆ. ಆಸ್ಪತ್ರೆಯಿಂದ ಸೂಕ್ತ ಚಿಕಿತ್ಸೆ ಕೊಡಲು ವೈದ್ಯರನ್ನು ನೇಮಕ ಮಾಡಲಾಗಿದೆ’ ಎಂದು ಹೆಚ್ಚಿನ ಮಾಹಿತಿ ನೀಡಿದರು.
ಈಗಾಗಲೇ ತಹಶೀಲ್ದಾರ್ ಸಂತ್ರಸ್ಥ ಚಾಲಕನಿಗೆ ಪರಿಹಾರ ನೀಡುವ ಬಗ್ಗೆ ಮಾಹಿತಿ ಪಡೆದು ತೆರಳಿದ್ದು ಜಿಲ್ಲಾಧಿಕಾರಿ ಸರ್ಕಾರದ ಜೊತೆ ಮಾತನಾಡಿ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಆಸ್ಪತ್ರೆ ಭೇಟಿ ಬಳಿಕ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.